ಸೋಮವಾರ, ಫೆಬ್ರವರಿ 9, 2015

ಕೆಟ್ಟಾ ಕೊಳಕು ಬಟ್ಟೆ... ಕೈಯಲ್ಲಿ ತಟ್ಟೆ...

ಎಲ್ಲಿದ್ರೋ ಇಲ್ಲೀ ತನಕ...
ಅದೆಲ್ಲಿಂದ ಬಂದ್ರಪ್ಪಾ....
ಅವರನ್ನು ಕಂಡಾಗಲೆಲ್ಲ ಹೀಗೆ ಅನ್ನಿಸುವುದುಂಟು.
ಎಣ್ಣೆ ನೀರು ಕಾಣದ ತಲೆ, ಕೆಟ್ಟಾ ಕೊಳಕು ಬಟ್ಟೆ, ಕೈಯಲ್ಲಿ ತಬಲವೋ, ಹಾರ್ಮೊನಿಯಮ್ಮೋ, ತಟ್ಟೆಯೋ ಹಿಡಿದು ಪುಟ್ಟ, ಪುಟ್ಟ ಕಂದಮ್ಮಗಳೊಂದಿಗೆ ಬಸ್ ಸ್ಟ್ಯಾಂಡೋ, ರಸ್ತೆ ಬದಿಯಲ್ಲೋ ಕಂಡು ಬರುವ ಇವರು ಬಸ್ ಪ್ರಯಾಣಿಕರ, ದಾರಿಹೋಕರ, ಕಂಡ ಕಂಡವರ ಕೈಕಾಲು ಹಿಡಿದು ಚಿಲ್ಲರೆ ಗಿಟ್ಟಿಸಿಕೊಳ್ಳುವುದನ್ನು ಕಂಡಾಗ ಎಂತವರಿಗೂ ಕರುಳು ಚುರುಕ್ಕೆನ್ನದಿರದು.
ಇವರಲ್ಲಿ ಹೆಂಗಸರು, ಗಂಡಸರು, ವೃದ್ಧರು, ಮಕ್ಕಳು ಮರಿಗಳು ಎನ್ನುವ ಬೇಧವಿಲ್ಲ. ಎಲ್ಲರೂ ವೃತ್ತಿಯಲ್ಲಿ ಸರಿ ಸಮಾನರು. ಎಲ್ಲರ ಬಾಯಲ್ಲೂ ಭವತಿ ಭಿಕ್ಷಾಂದೇಹಿ...
ಇಂದು ಉಡುಪಿ ಮಂಗಳೂರಿನಂತ ಊರಿನಲ್ಲಿ ಐನೂರಕ್ಕೂ ಅಧಿಕ ಮಂದಿ ಭಿಕ್ಷುಕರಿದ್ದಾರೆ. ಇವರ ಪೈಕಿ ಗಂಡಸರು ಹಾರ್ಮೊನಿಯಂ, ತಬಲ ಹಿಡಿದು ಮನೆಮನೆ ತಿರುಗಿದರೆ, ಹೆಂಗಸರು, ಮಕ್ಕಳನ್ನೂ ತಮ್ಮ ವೃತ್ತಿಗೆ ತೊಡಗಿಸಿಕೊಳ್ಳುತ್ತಾರೆ. ಇನ್ನುಳಿದ ಹಸುಗೂಸುಗಳು ನಗರದುದ್ದಕ್ಕೂ ಸ್ವಂತಂತ್ರವಾಗಿ ಓಡಾಡಿಕೊಂಡಿರುತ್ತವೆ. ಸಾಮಾನ್ಯವಾಗಿ ಹುಬ್ಬಳ್ಳಿ ಕೊಪ್ಪಳ ಮೊದಲಾದೆಡೆಗಳಿಂದ ವಲಸೆ ಬರುವ ಇವರು ಸಾಮಾನ್ಯವಾಗಿ ಒಂದೇ ಪರಿಸರದಲ್ಲಿ ಬಿಡಾರ ಹುಡುತ್ತಾರೆ. ನಸುಕಿನಲ್ಲೇ ತಮ್ಮ ’ಡ್ಯೂಟಿ’ ಗಿಳಿದರೇ ಕತ್ತಲಾಗುವಷ್ಟರಲ್ಲಿ ಕನಿಷ್ಟ ೨೦೦ರಿಂದ ೩೦೦ ರೂ.ಗಳ ವರೆಗೆ ಸಂಪಾದಿಸುತ್ತಾರೆ.
ಗಂಡಸರು, ಹೆಂಗಸರ ವಿಚಾರ ಒತ್ತಟ್ಟಿಗಿರಲಿ. ಇನ್ನೂ ಜಗವರಿಯದ ಇವರ ಮಕ್ಕಳ ಗತಿ?
ಅಲ್ಲಮ್ಮ... ಮಕ್ಕಳನ್ನು ಶಾಲೆಗೆ ಕಳುಹಿಸದೆ ಭಿಕ್ಷೆಗೆ ಕಳುಹಿಸುತ್ತಿದ್ದೀಯಲ್ಲಾ ತಪ್ಪಲ್ಲೇ? ಅಂತ ಪ್ರಶ್ನಿಸಿದರೆ. ಹಂಗಾದ್ರೆ ನಾವೂ ಊಟ ಮಾಡೋದು ಬ್ಯಾಡ್ವಾ? ಅನ್ನೋ ಸಿದ್ಧ ಉತ್ತರ ಅವರಿಂದ ಸಿಗುತ್ತದೆ. ಇನ್ನು ಮಕ್ಕಳನ್ನು ಕೇಳಿದರೆ ಅದ್ಯಾವುದೋ ಶಾಲೆಯ ಹೆಸರು ಹೇಳಿ, ಅಲ್ಲಿಗೆ ಹೋಗುತ್ತೇವೆ ಎಂದು ಫಣಂಗನೆ ಮಾಯವಾಗುತ್ತಾರೆ. ಬರಿಗಾಲಿನಲ್ಲಿ ನಗರವಿಡೀ ಸುತ್ತಾಟ, ಹಸಿವಾದಾಗ ಸಿಕ್ಕಿದ್ದನ್ನು ಹೆಕ್ಕಿ ತಿನ್ನುವ, ಸಿಕ್ಕಸಿಕ್ಕಲ್ಲಿ ನೀರು ಕುಡಿದು ದಾಹ ತೀರಿಸಿಕೊಳ್ಳುವ ಈ ಪುಟಾಣಿಗಳ ಬದುಕು ಇಷ್ಟರಲ್ಲೇ ಮುರುಟಿ ಹೋಗಬೇಕಾ?
ಮಕ್ಕಳಿಗಾಗಿ ಸರಕಾರದ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ಲು, ಸರ್ವಶಿಕ್ಷಾ ಅಭಿಯಾನ, ಮತ್ತೆ ಶಾಲೆಗೆ ಕರೆತರುವ ಯೋಜನೆಗಳೆಲ್ಲ ಇವರನ್ಯಾಕೆ ಮುಟ್ಟುತ್ತಿಲ್ಲ? ಇನ್ನು ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ... ಅದೂ ಕೂಡಾ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದಂತೆ ಕಂಡುಬರುತ್ತಿಲ್ಲ, ಭಿಕ್ಷಾಟನೆ ಕಾನೂನು ರೀತಿಯಲ್ಲಿ ಅಪರಾಧ. ಒಂದು ವೇಳೆ ಭಿಕ್ಷುಕರು ಕಂಡು ಬಂದರೆ ಅವರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಅಚ್ಚರಿಯೆಂದರೆ ಇಲ್ಲಿ ಅದ್ಯಾವುದೂ ನಡೆಯುತ್ತಿಲ್ಲ. ಉಡುಪಿ-ಮಂಗಳೂರಿನಲ್ಲಿ ಈ ವಲಸೆ ಮಂದಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದಾರಾದರೂ ಇಲ್ಲಿಯ ಮಕ್ಕಳಿನ್ನೂ ಅಕ್ಷರ ಕಂಡಿಲ್ಲ ಎನ್ನುವುದು ಸತ್ಯ.
ಪ್ರಗತಿ ಪಥದಲ್ಲಿದ್ದೇವೆ ಎಂದು ಕರೆಯಿಸಿಕೊಳ್ಳುವ ನಮ್ಮಬುದ್ಧಿವಂತರ ಜಿಲ್ಲೆಯಲ್ಲಿ ಈ ಭಿಕ್ಷಟನೆಯಲ್ಲಿ ತೊಡಗಿರುವವರ ಮತ್ತು ಅವರ ಮಕ್ಕಳ ಭವಿಷ್ಯದ ಕುರಿತು ಚಿಂತಿಸುವವರೇ ಇಲ್ಲ.
ಇದು ದುರಾದಷ್ಟವಲ್ಲದೆ ಇನ್ನೇನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ