ಸೋಮವಾರ, ಫೆಬ್ರವರಿ 9, 2015

ನಾರಾಯಣಹರಿಗೊಂದು ಥ್ಯಾಂಕ್ಸ್ !


ಇಂದು ವೈದ್ಯರ ದಿನ.
ವ್ಯಾಲೆಂಟೈನ್ಸ್ ಡೇ, ಫ್ರೆಂಡ್ ಶಿಪ್ ಡೇ, ಆ...ಡೇ, ಈ... ಡೇ ಅಂತೆಲ್ಲಾ ವಾರಕ್ಕೂ ಮುಂಚೆ ನೆನಪಿಸಿಕೊಳ್ಳುವ ನಮಗೆ ಅದ್ಯಾಕೋ ಏನೋ ಈ ಡಾಕ್ಟ್ ಱ್ಸ್ ಡೇ ನೆನಪಿಗೇ ಬರುವುದಿಲ್ಲ.
ಹೆಚ್ಚಿನ ಮಂದಿಗೆ ದೂರದಲ್ಲೆಲ್ಲೋ 'ಉಚಿತ ಆರೋಗ್ಯ ತಪಾಸಣಾ ಶಿಬಿರ' ಎಂಬ ದೊಡ್ಡ ಪ್ಲೆಕ್ಸ್ ಓದುವಾಗಲಷ್ಟೇ ಇದು ವೈದ್ಯರ ದಿನದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಅನ್ನೋದು ತಿಳಿಯುತ್ತದೆ.
ಜುಲೈ 1 ವೈದ್ಯರ ದಿನವಲ್ಲವಾ... ಅನ್ನೋ ಅರಿವಾಗುತ್ತದೆ.
ಭಾರತದ ವೈದ್ಯಕೀಯ ಇತಿಹಾಸದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿ ಹೋದ ಡಾ. ಬಿದಿನ್ ಚಂದ್ರಪಾಲ್ ಅವರ ಕೊಡುಗೆಗಳನ್ನು ಗೌರವಿಸುವ ಸಂಕೇತವಾಗಿ ನಮ್ಮಲ್ಲಿ ಪ್ರತೀ ಜುಲೈ 1ನ್ನು ವೈದ್ಯರ ದಿನವಾಗಿ ಆಚರಿಸಲಾಗುತ್ತದೆ.
ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ವೈದ್ಯರು ಎಷ್ಟು ಪ್ರಾಮುಖ್ಯರು ಮತ್ತು ಅವರ ಚಿಕಿತ್ಸೆಗಳು ನಮಗೆ ಎಷ್ಟು ಅಮೂಲ್ಯ ಎಂಬುದನ್ನು ನೆನಪಿಸಿಕೊಳ್ಳುವುದೂ ಇದರ ಹಿಂದಿರುವ ಉದ್ದೇಶ.
ಸುಮ್ಮನೆ ಯೋಚಿಸಿ ನೋಡಿ,
ವೈದ್ಯರು ನಮ್ಮ ಜೀವನದಲ್ಲಿ ಅದೆಷ್ಟು ಮುಖ್ಯ ಪಾತ್ರ ವಹಿಸುತ್ತಾರೆ ಎಂಬುದು ಅರಿವಾಗುತ್ತದೆ.
ದಿನಪೂರ್ತಿ ನಿದ್ದೆ ಬಂದರೂ ಅವರು ಬೇಕು, ಆಕಸ್ಮಾತ್ ನಿದ್ದೆ ಬರದಿದ್ದರೂ ಅವರು ಬೇಕು. ಮನಸ್ಸಿಗೆ ಹಿಂಸೆಯಾದರೆ, ಕಣ್ಣು ಕತ್ತಲೆ ಬಂದರೆ, ಕೈ-ಕಾಲು ಮುರಿದು ಹೋದರೆ, ನಡೆದಾಡಲು ಸಾಧ್ಯವಾಗದಿದ್ದರೆ, ಅಷ್ಟೇ ಯಾಕೆ ಕಣ್ಣಿಗೊಂದು ಪುಟ್ಟ ಕಸ ಬಿದ್ದರೂ ಅವರೇ ಬೇಕು. ಒಟ್ಟಿನಲ್ಲಿ ನಮ್ಮ ಬಾಳ ಬಂಡಿ ತಳ್ಳಲು ಅವರದ್ದೊಂದು ಕೈ ಇರಲೇಬೇಕು.
ಅದಕ್ಕೆ ಇರಬೇಕು 'ವೈದ್ಯೋ ನಾರಾಯಣೋ ಹರಿಃ' ಅನ್ನೋದು.
ರಾತ್ರಿ ಹಗಲು, ಹಸಿವು ನಿದ್ರೆಗಳ ಪರಿವೇ ಇಲ್ಲದೆ ಸದಾ ಇನ್ನೊಂದು ಜೀವವನ್ನು ಸುಖವಾಗಿಡಲು ಶ್ರಮಿಸುವ ಈ ವೈದ್ಯರು ಕೂಡಾ ನಮ್ಮ ನಿಮ್ಮಂತೆಯೇ ಮನುಷ್ಯ ಜೀವಿ. ಅವರಿಗೂ ಆರಾಮ ಬೇಕು, ಅವರಿಗೂ ಕುಟುಂಬ ಬೇಕು. ಅಷ್ಟೇ ಅಲ್ಲ ಮನಸ್ಸಿಗೊಂದಿಷ್ಟು ಮನರಂಜನೆ, ಕರ್ತವ್ಯದ ಏಕಾನತೆಯಿಂದ ಹೊರಬರಬೇಕು ಎಂಬ ಆಸೆ ಅವರಿಗೂ ಇರುತ್ತದೆ. ಚೋದ್ಯವೆಂದರೆ ಅದೆಲ್ಲವನ್ನೂ ಎದುರು ಕೂತ ರೋಗಿಯ ಕಂಡಾಗ ಅನಿವಾರ್ಯವಾಗಿ ಮರೆಯಲೇ ಬೇಕಾಗುತ್ತದೆ. ಮರೆಯುತ್ತಾರೆ ಕೂಡಾ.
ಸದಾ ಕಾಲ ನಮ್ಮ ಸುಖ-ಸಂತೋಷಗಳಿಗಾಗಿ ಶ್ರಮಿಸುವ ವೈದ್ಯರಿಗೂ ಒಂದಿಷ್ಟು ನೆಮ್ಮದಿ ನೀಡುವುದು ನಮ್ಮ ಬಳಿಯಲ್ಲಿ ಸಾಧ್ಯವಾಗಬೇಕು. ನಿಗದಿಪಡಿಸಿದ ಸಮಯಕ್ಕೆ ಭೇಟಿಯಾಗದಿರುವುದು, ವೈದ್ಯರು ರಜೆಯಲ್ಲಿ, ಪ್ರವಾಸದಲ್ಲಿರುವುದು ಗೊತ್ತಿದ್ದೂ ಪದೇ ಪದೇ ಅವರನ್ನು ಸಂಪರ್ಕಿಸುವುದು, ಹೊತ್ತಲ್ಲದ ಹೊತ್ತಿನಲ್ಲಿ ಅನಿವಾರ್ಯವಲ್ಲದಿದ್ದರೂ ಚಿಕಿತ್ಸೆಗಾಗಿ ಪೀಡಿಸುವುದು. ಉಡಾಫೆಯಿಂದ ವರ್ತಿಸುವುದು, ಅವರ ಸಹನೆ ಪರೀಕ್ಷಿಸುವುದು, ಇದೆಲ್ಲ ಮಾಡುವುದರಿಂದ ನಾವು ವೈದ್ಯರನ್ನು ದುರುಪಯೋಗಪಡಿಸಿಕೊಂಡಂತಾಗುತ್ತದೆ. ಇದು ಅಕ್ಷಮ್ಯವೂ ಹೌದು. ಯಾಕೆಂದರೆ ತುರ್ತು ಸಂದರ್ಭಗಳಲ್ಲಿ ಯಾವುದೇ ಹೊತ್ತಿನಲ್ಲಿ ಕರ್ತವ್ಯಕ್ಕೆ ತಲೆಬಾಗುವ ವೈದ್ಯರಿಗೆ ನಾವು ಆಭಾರಿಗಳಾಗಿರಬೇಕೇ ಹೊರತು ಎಂದಿಗೂ 'ಭಾರೀ'ಗಳಾಗಬಾರದು.
ಹೇಗೆ ಆಚರಿಸಿಕೊಳ್ಳಬಹುದು?
ನಮ್ಮ ಬದುಕಿನುದ್ದಕ್ಕೂ ಆಪತ್ಭಾಂಧವರಾಗಿರುವ ವೈದ್ಯರಿಗೆ ಅಂದವಾದ ಶುಭಾಶಯ ಪತ್ರವೊಂದನ್ನು ಕಳುಹಿಸಬಹುದು. ಅನುಮತಿಯೊಂದಿಗೆ ಅವರ ಮನೆಗೆ ಭೇಟಿಯಿತ್ತು ವೈಯಕ್ತಿಕ ಅಭಿನಂದನೆ ಸಲ್ಲಿಸಬಹುದು. ವಿಶೇಷ ಸಮಾರಂಭ ಏರ್ಪಡಿಸಿ ಅವರನ್ನು ಗೌರವಿಸಬಹುದು, ಆಸ್ಪತ್ರೆಗಳಿಗೆ ತೆರಳಿ ಸಿಹಿ ತಿನ್ನಿಸಬಹುದು.
ನಮ್ಮ ವೈದ್ಯರೆಂದರೆ...
ಹೌದು, ಇಂದು ಭಾರತೀಯ ವೈದ್ಯರು ತಮ್ಮ ಸಾಧನೆಗಳ ಮೂಲಕ ವಿಶ್ವದಲ್ಲಿಯೇ ಗುರುತಿಸಿಕೊಂಡಿದ್ದಾರೆ.
ಅತ್ಯಾಧುನಿಕ ಚಿಕಿತ್ಸೆಗಳು ಕೂಡಾ ಇಂದು ನಮ್ಮಲ್ಲಿ ಲಭ್ಯವಿದೆ ಎಂದರೆ ಅದರ ಹಿಂದೆ ನಿಜಕ್ಕೂ ನಮ್ಮ ವೈದ್ಯರ ಶ್ರಮವಿದೆ. ಹಾಗಾಗಿಯೇ ಉಳಿದೆಲ್ಲ ದಿನಾಚರಣೆಗಳಿಂದ ಒಂದಿಷ್ಟು ವಿಭಿನ್ನವಾಗಿ ವೈದ್ಯರ ದಿನವನ್ನು ಆಚರಿಸಿಕೊಳ್ಳಬೇಕಿದೆಯಲ್ಲದೇ,
ಈ ಮೂಲಕ ಅವರ ಕರ್ತವ್ಯ ಪ್ರಜ್ಞೆಯನ್ನು ಇನ್ನಷ್ಟು ಜಾಗೃತಗೊಳಿಸಬೇಕಿದೆ.
ಇನ್ನೂ ಏನೂ ಓದುತ್ತಾ ಕೂತಿದ್ದೀರಿ. ಹೊರಡಿ ಈಗಲೇ ನಿಮ್ಮ ಮೆಚ್ಚಿನ ಡಾಕ್ಟರ್ ಗೊಂದು 'ಹ್ಯಾಪೀ ಡಾಕ್ಟಱ್ಸ್ ಡೇ...' ಅಂದುಬಿಡಿ.
ಯಾವತ್ತೂ ನಿಮ್ಮ ಮುಖದ ನಗು ಅರಳಿಸುವ ಅವರು ನಿಮ್ಮಿಂದಲೂ ಒಂದಿಷ್ಟು ಹೊತ್ತು ನಗುವಂತಾಗಲಿ.!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ