ಭಾನುವಾರ, ಫೆಬ್ರವರಿ 22, 2015

ಅಡಿಕೆಯ ಕಳೆ ಕಳೆದೀತು ಕೊಳೆ ರೋಗ....

ಕರಾವಳಿ ಭಾಗದ ಅಡಿಕೆ ಕೃಷಿಕರೇ ಹಾಗೆ!
ಪ್ರತೀ ಬಾರಿ ಮಳೆಗಾಲ ಅರಂಭವಾಯಿತೆಂದರೆ ಸಾಕು, ಒಂದಷ್ಟು ಭಯ, ಆತಂಕ, ನಿರೀಕ್ಷೆಯೊಂದಿಗೇ ಅವರು ವರುಣನನ್ನು ಸ್ವಾಗತಿಸುತ್ತಾರೆ. ಅದಕ್ಕೆ ಕಾರಣವೂ ಇದೆ, ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು. ವರ್ಷ ಪೂರ್ತಿ ಮಗುವಿನಂತೆ ಸಲಹಿದ ತಮ್ಮ ಬೆಳೆಗೆ, ಮಳೆ ಅದೆಲ್ಲಿ ಕಂಟಕ ತಂದಿಡುತ್ತದೋ ಎಂಬ ಪುಟ್ಟ ಭಯ ಅವರದ್ದು.
ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು.
ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಬೆಳೆ ಅಡಿಕೆ. ಇದರಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲ. ಈ ಭಾಗದ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭ್ರದತೆ ಒದಗಿಸುವಲ್ಲಿ ಮುಖ್ಯ ಪಾತ್ರ ಈ ಅಡಿಕೆಯದ್ದೇ.
ಇಲ್ಲಿ ಸರಿಸುಮಾರು ೨೭,೬೪೫ ಹೆಕ್ಟೇರ್ ಗಳಿಗೂ ಹೆಚ್ಚಿನ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆರ್ಥಿಕ ಸಬಲತೆಗೆ ಯೋಗ್ಯವಾದ ಬೆಳೆ ಅಂತ ಹೇಳಬಹುದಾದರೂ ಇದೇನು ಅಷ್ಟು ಸಲೀಸಾಗಿ ಬೆಳೆಯುವ ಕೃಷಿ ಪ್ರಕಾರ ಅಲ್ಲ. ಈ ಭಾಗದಲ್ಲಿ ಅನೇಕ ವರ್ಷಗಳಿಂದ ಅಡಿಕೆ ಬೆಳೆಯುತ್ತಾ ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಬದಲಾಗುತ್ತಿರುವ ಋತುಮಾನಕ್ಕೆ ಕಾಣಿಸಿಕೊಳ್ಳುತ್ತಿರುವ ಕೀಟ ಹಾಗೂ ರೋಗಗಳಿಂದಾಗಿ ಅಡಿಕೆ ಗುಣಮಟ್ಟ ಹಾಗೂ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಈಗಂತೂ ಮಳೆಗಾಲ. ಎಲ್ಲೆಡೆ ಅಡಿಕೆಗೆ ಕೊಳೆರೋಗದ್ದೇ ಆತಂಕ. ಮಳೆ ನೀರಿಗೆ ಸಾಮಾನ್ಯವಾದ ಈ ರೋಗ ಅಡಿಕೆ ಇಳುವರಿ ಮೇಲೆ ಮಾತ್ರ ತೀವ್ರ ದುಷ್ಪರಿಣಾಮ ಬಿರುತ್ತದೆ. ಈ ರೋಗ ತೋಟವೊಂದಕ್ಕೆ ಲಗ್ಗೆ ಇಟ್ಟಿತೆಂದರೆ ಇಳುವರಿಯಲ್ಲಿ ಶೇ.೫೦ ರಿಂದ ೯೦ ರಷ್ಟು ನಷ್ಟ ಉಂಟಾಯಿತೆಂದೇ ಅರ್ಥ.
ಕೊಳೆರೋಗದ ಲಕ್ಷಣ ಏನೆಂದರೆ...
ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತದೆ. ನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಬಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ನೋಡನೋಡುತ್ತಲೇ ಗೊಂಚಲಿನಿಂದ ಕಳಚಿ ಉದುರಿಹೋಗುತ್ತದೆ.
ಹರಡುವಿಕೆ ಹೇಗೆ?
ಕೊಳೆರೋಗ ಫೈಟಾಪ್ರತ್ ಆರಕೆ ಎಂಬ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.
ಹತೋಟಿ ಹೇಗೆ?

ಕೊಳೆ ರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ಮೊದಲು ತೆಗೆದು ನಾಶಪಡಿಸಬೇಕು. ಅಡಿಕೆ ಗೊನೆಗೆ ಪಾಲಿಥೀನ್ ಹೊದಿಕೆ ಕಟ್ಟುವುದರಿಂದಲೂ ರೋಗದ ಹತೋಟಿ ಸಾಧ್ಯ. ಮೂರು ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಪ್ರತೀ ಲೀಟರ್ ನೀರಿನಲ್ಲಿ ಅಥವಾ ಶೇಕಡಾ ಒಂದರ ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ ೩೦ ರಿಂದ ೪೫ ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ. ಒಂದು ವೇಳೆ ಮಳೆಗಾಲ ಮುಂದುವರಿದಲ್ಲಿ ಮೂರನೇ ಬಾರಿಯೂ ಸಿಂಪಡಸಬೇಕಾಗುವುದು. ರೋಗಾಣು ಮಣ್ಣಿನ ಪದರಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಈಗಂತೂ ಕೊಳೆರೋಗ ನಿವಾರಿಸಲು, ತೋಟಗಾರಿಕಾ ಇಲಾಖೆ ’ಹಾಟ್ ಕ್ಲಿನಿಕ್’ಗಳನ್ನು ಸ್ಥಾಪಿಸಿ, ಕೃಷಿಕರ ಸಹಾಯಕ್ಕೆ ನಿಂತಿದೆ.
ಬೋರ್ಡೋದ್ರಾವಣ...
ಬೋರ್ಡೋ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ ನಾಶಕ. ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರ ಸಸ್ಯ ರೋಗಗಳ ಸಮರ್ಪಕ ನಿರ್ವಹಣೆ ಸಾಧ್ಯ.
ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ಮೈಲುತುತ್ತು ಒಂದು ಕೆ.ಜಿ, ಸುಣ್ಣ ಒಂದು ಕೆ.ಜಿ, ನೀರು ನೂರು ಲೀಟರ್, ೧೦ ಲೀಟರ್ ಸಾಮರ್ಥ್ಯದ ಎರಡು ಪ್ಲಾಸ್ಟಿಕ್ ಬಕೆಟ್, ೧೦೦ ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಡ್ರಮ್.
ಒಂದು ಕೆ.ಜಿ. ಮೈಲುತುತ್ತನ್ನು ಸಂಪೂರ್ಣ ೧೦ಲೀಟರ್ ನೀರಿನಲ್ಲಿ ಕರಗಿಸಬೇಕು. ಒಂದು ಕೆ.ಜಿ ಸುಣ್ಣವನ್ನು ಮತ್ತೊಂದು ೧೦ ಲೀಟರ್ ನೀರಿನಲ್ಲಿ ಕರಗಿಸಬೇಕು. ಎರಡನ್ನು ಒಂದು ಪ್ಲಾಸ್ಟಿಕ್ ಡ್ರಮ್ ಗೆ ಸುರಿಯಬೇಕು. ಈಗ ಬೋರ್ಡೋ ದ್ರಾವಣ ಸಿದ್ಧ. ಇದು ಸರಿ ಇದೆಯೇ ಎಂದು ಪರೀಕ್ಷಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿ ತೆಗೆದಲ್ಲಿ ಅದರ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡಬಂದಲ್ಲಿ ದ್ರಾವಣ ಆಮ್ಲಯುಕ್ತವಾಗಿದ್ದು, ಸಿಂಪಡಣೆಗೆಯೋಗ್ಯವಾಗಿಲ್ಲ ಎಂಬುದಾಗಿ ತಿಳಿಯಬೇಕು. ಇದನ್ನು ಸರಿಪಡಿಸಲು ಇನ್ನೂ ಸ್ವಲ್ಪ ಸುಣ್ಣ ತಿಳಿಯನ್ನು ದ್ರಾವಣಕ್ಕೆ ಸೇರಿಸಬೇಕು. ನಂತರ ಚಾಕೂ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿದಾಗ ಅದು ಹೊಳಪಾಗಿದಲ್ಲಿ ದ್ರಾವಣ ಸಿಂಪಡಣೆಗೆ ಸೂಕ್ತ ಎಂದು ತಿಳಿಯುವುದು ಹಾಗೂ ಕೂಡಲೇ ದ್ರಾವಣವನ್ನು ಸಿಂಪಡಸಬೇಕು.
ಅಡಿಕೆ ಕೊಳೆರೋಗ ನಿಯಂತ್ರಿಸಲು ರೈತರು ಮೈಲುತುತ್ತು ಬಳಸಿದ್ದಲ್ಲಿ ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ಜಿಲ್ಲಾ ವಲಯ ಸಸ್ಯ ಸಂರಕ್ಷಣೆ ಯೋಜನೆ ಹಾಗೂ ರಾಜ್ಯ ವಲಯ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಗಳಲ್ಲಿ ಶೇ.೫೦ರಷ್ಟು ಸಹಾಯಧನ ದೊರೆಯಲಿದೆ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅತೀ ಹೆಚ್ಚು. ಹಾಗಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಭೀತಿಯೂ ಹೆಚ್ಚು. ಆದರೆ ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಂಡಲ್ಲಿ ರೋಗಗಳನ್ನು ತಡೆಗಟ್ಟಿ ಉತ್ತಮ ಗುಣಮಟ್ಟದ ಅತಿಹೆಚ್ಚು ಇಳುವರಿ ಪಡೆಯಲು ಖಂಡಿತಾ ಸಾಧ್ಯವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ