ಸೋಮವಾರ, ಫೆಬ್ರವರಿ 9, 2015

ನಾಟ್ ಗುಡ್, ನಾಟ್ ಬ್ಯಾಡ್...

ನೋಡನೋಡುತ್ತಿದ್ದಂತೆಯೇ ಮಳೆಗಾಲದ ಒಂದು ತಿಂಗಳು ಅದಾಗಲೇ ಸರಿದು ಹೋಗಿದೆ.
ಈ ಅವಧಿಯಲ್ಲಿ ಹೇಳಿಕೊಳ್ಳುವಂತಹಾ ಯಾವುದೇ ಅನಾಹುತ ಕಾಣಿಸದಿರುವುದು ಸಮಾಧಾನದ ಸಂಗತಿ.
ಜೂನ್ ಮಧ್ಯಭಾಗದಲ್ಲಿ ಮಾಮೂಲಾಗಿ ಇರಬೇಕಿದ್ದ ಪ್ರವಾಹ ಸ್ಥಿತಿ ಈ ಬಾರಿ ಇಲ್ಲಿಯ ತನಕ ಉದ್ಭವಿಸಿಲ್ಲ.
ಮಳೆ ಇಲ್ಲ.. ಮಳೆ ಇಲ್ಲ ಎಂಬ ಕೂಗಿನ ನಡುವೆಯೂ  ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಸಮಾನಾಗಿಯೇ ಇರುವುದು ಇನ್ನೊಂದು ಸಮಾಧಾನ ತರುವ ಸಂಗತಿ.
ಈ ಬಾರಿ ಮಾನ್ಸೂನ್ ಆರಂಭಕ್ಕೂ ಮುನ್ನ ಅತಿಥಿಯಂತೆ ಬಂದು ಹೋದ ಒಂದೆರಡು ಮಳೆ, ಗುಡುಗು-ಸಿಡಿಲನ್ನು ಹಿಮ್ಮೇಳಕ್ಕಾಗಿ ಕರೆತಂದಿತ್ತು. ಅಲ್ಲದೆ ಇದರ ಆರ್ಭಟ ಹಲವೆಡೆಗಳಲ್ಲಿ ಜೀವ ಹಾನಿ, ಆಸ್ತಿ ಪಾಸ್ತಿ ನಾಶಕ್ಕೆ ಕಾರಣವಾಗಿದ್ದವು. ಬಿರುಗಾಳಿ, ಸುಂಟರ ಗಾಳಿಗಳಿಗೆ ದಕ್ಷಿಣ ಕನ್ನಡ, ಉಡುಪಿ ಎರಡೂ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿನ ಹಾನಿ ಸಂಭವಿಸಿತ್ತು.
ಮಳೆ ಮರಗಿಡ ಮನೆಮಾರುಗಳಿಗೆ ಹಾನಿ ಎಸಗಿತ್ತು. ಇದನ್ನು ಕಂಡವರೆಲ್ಲ ಈ ಬಾರಿಯ ಮಾನ್ಸೂನ್ ಹೇಗಿರಬಹುದಪ್ಪಾ.. ಎಂದು ಆತಂಕಕ್ಕೊಳಗಾಗಿದ್ದರು.
ಆದರೆ ಬಂದ ಮಾನ್ಸೂನ್ ಅಷ್ಟೂ ಆತಂಕವನ್ನು ದೂರಮಾಡಿದೆ. ಯಾವುದೇ ಅಪಾಯವಿಲ್ಲದೆ ತಿಂಗಳೊಂದನ್ನು ಪೂರ್ತಿಗೊಳಿಸಿ ಮುಂದಡಿಯಿಟ್ಟಿದೆ. ರೋಹಿಣಿ, ಮೃಗಶಿರಾ ಮಳೆ ನಕ್ಷತ್ರದ ಪ್ರವೇಶವಾಗಿದ್ದರೂ ಯಾಕೋ ಮಾನ್ಸೂನ್ ಅಬ್ಬರ ಮಾತ್ರ ಕಾಣಿಸುತ್ತಿಲ್ಲ. ಕಳೆದ ಒಂದು ವಾರದಿಂದ ವಿರಳವಾಗಿದ್ದ ಮಳೆ ಬುಧವಾರದಿಂದ ಮತ್ತೆ ಬಿರುಸುಗೊಂಡಂತೆ ಕಂಡರೂ ಮರುದಿನವೇ ಕ್ಷೀಣಿಸಿ ಬಿಟ್ಟಿದೆ.
 ಜುಲೈ, ನಿರೀಕ್ಷೆಯಕಾಲ...
ಜೂನ್ 15 ರಿಂದ ಅಗಸ್ಟ್ 15 ರವರೆಗೆ ಹೇಳಿಕೇಳಿ ನಟ್ಟನಡುವೆ ಮಳೆಗಾಲ. ಹಿಂದೆಲ್ಲಾ ಆಕಾಶ ಭೂಮಿ ನಡುವೆ ಮಳೆ ಶರಪಂಜರ ಹೂಡುವ ಕಾಲ. ಮನೆಬಿಟ್ಟು ಹಿತ್ತಲಿಗಿಳಿಯಲೂ ಹಿಂದೆ ಮುಂದೆ ನೋಡಾ ಬೇಕಾದ ರೀತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿ ಬಿಡುವ ಸನ್ನಿವೇಶಗಳನ್ನು ಸೃಷ್ಟಿಸುವ ಕಾಲ.
ಆದರೆ ಈ ಬಾರಿ ಅಂತಹಾ ಮಳೆಯ ದೃಶ್ಯಗಳು ಕಂಡು ಬಂದಿಲ್ಲ. ದಿನನಿತ್ಯ ಬಿಸಿಲು ಮಳೆ ವಾತಾವರಣ ಇನ್ನೂ ಮುಂದುವರಿದಿದೆ.
ಈ ಬಾರಿಯ ಜುಲೈ ತಿಂಗಳು ನಿರೀಕ್ಷೆಯ ಕಾಲವಾಗಿದೆ. ರೈತಾಪಿ ಜನರು ಮಳೆ ರಾಯನ ಆಗಮನಕ್ಕೆ ಕಾತರಿಸಿದ್ದಾರೆ.
ಇದುವರೆಗೆ  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 794.7 ಮಿ.ಮೀ ಮಳೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ 629.5 ಮಿ.ಮೀ ಮಾತ್ರ ಮಳೆಯಾಗಿತ್ತು.
ಒಟ್ಟಾರೆಯಾಗಿ ನಾಟ್ ಗುಡ್, ನಾಟ್ ಬ್ಯಾಡ್ ಅನ್ನುವಂತೆ ಸಾಗುತ್ತಿದೆ ಈ ಮಳೆಗಾಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ