ಭಾನುವಾರ, ಫೆಬ್ರವರಿ 22, 2015

ಅವರೇಕೆ ಹಾಗೆ, ಮತ್ತೆ ಇವರೇಕೆ ಹೀಗೆ....

internet image
ಪರೀಕ್ಷೆಯಲ್ಲಿ ಕಡಿಮೆ ಅಂಕ: ವಿದ್ಯಾರ್ಥಿ ನೇಣಿಗೆ ಶರಣು...
ಮನೆಯಲ್ಲಿ ಬೈದರೆಂದು ಬಾವಿಗೆ ಹಾರಿದ ಬಾಲಕ...
ಪ್ರೇಮ ವೈಫಲ್ಯ: ಯುವ ಜೋಡಿ ಆತ್ಮಹತ್ಯೆ...
ಇದು ಇಂದು ನಾವು ದಿನನಿತ್ಯ ಸುದ್ದಿ ಪತ್ರಿಕೆಗಳಲ್ಲಿ ನೋಡುತ್ತಿರುವ ಹೆಡ್ಡಿಂಗ್‌ಗಳು.
ಹದಿಹರೆಯದ ಜೀವವೊಂದು ಆತ್ಮಹತ್ಯೆ ಮಾಡಿಕೊಳ್ಳದ ದಿನವೇ ಇಲ್ಲ ಎಂಬಷ್ಟರಮಟ್ಟಿಗೆ ಈ ಆತಂಕಕಾರಿ ಬೆಳವಣಿಗೆಗೆ ಬಂದು ನಿಂತಿದೆ.
ಯಾಕೆ ಹೀಗೆ? ಇಂದಿನ ಮಕ್ಕಳೇಕೆ ಅಷ್ಟು ದುರ್ಬಲ ಮನಸ್ಸಿನವರು?
ಮೊನ್ನೆ ಹಿರಿಯರೊಬ್ಬರು ಹೇಳುತ್ತಿದ್ದರು, ’ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ... ಆತ್ಮಹತ್ಯೆ ಅನ್ನೋದು ಮಹಾಪಾಪ ಎನ್ನುವ ಮನಸ್ಥಿತಿಯಿತ್ತು. ಅನಾರೋಗ್ಯದಲ್ಲಿ ಮೃತಪಡುತ್ತಿದ್ದರೇ ವಿನಹಾ ನಮ್ಮ ಕಾಲದ ಮಕ್ಕಳಾರೂ ಇಂತಹಾ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ...’
ಹೌದು. ಹಿಂದೆ ಇಂತಹಾ ಪ್ರಕರಣಗಳು ಇಲ್ಲವೇ ಇಲ್ಲ ಎಂಬಷ್ಟರಮಟ್ಟಿಗೆ ಕಡಿಮೆ ಇದ್ದವು. ಅಂದಿನ ಕುಟುಂಬ ವ್ಯವಸ್ಥೆ ಇಂದಿಗಿಂತ ಬಲಿಷ್ಟವಾಗಿತ್ತು. ಅವಿಭಕ್ತ ಕುಟುಂಬಗಳಲ್ಲಿ ಅಜ್ಜ-ಅಜ್ಜಿಯಂತಹಾ ಹಿರಿಯರು ನಿತ್ಯ ಮಕ್ಕಳನ್ನು ಎದುರು ಕೂರಿಸಿಕೊಂಡು ನಮ್ಮ ಆಚರಣೆಗಳು, ಕಟ್ಟುಪಾಡುಗಳು, ಸಂಸ್ಕೃತಿ, ಪುರಾಣಗಳ ಪರಿಚಯ ಮಾಡಿಕೊಡುತ್ತಿದ್ದರು. ಇತಿಹಾಸ, ಪುರಾಣಗಳಲ್ಲಿ ವಿಜೃಂಭಿಸಿದ ಮಹಾನುಭಾವರ ಬದುಕಿನ ಚಿತ್ರಣ ಕಣ್ಣಿಗೆ ಕಟ್ಟಿಕೊಟ್ಟು ಉತ್ತಮ ಭವಿಷ್ಯ ರೂಪಿಸುವತ್ತ ಮಾರ್ಗದರ್ಶನ ನೀಡುತ್ತಿದ್ದರು. ಇದರ ಪರಿಣಾಮವಾಗಿ ಮಕ್ಕಳು ಸಹಜವಾಗಿಯೇ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದರು. ಎಲ್ಲರೂ ಒಗ್ಗಟ್ಟಿನಿಂದ, ತುಂಬು ಕುಟುಂಬದಲ್ಲಿ ಬಾಳುತ್ತಿದ್ದರಾದ್ದರಿಂದ ಧೈರ್ಯವೂ ಅವರ ಜೊತೆಗೂಡುತ್ತಿತ್ತು. ಹಿರಿಯರ ಮಾರ್ಗದರ್ಶನ, ಅಪ್ಪನ ಶಿಸ್ತು, ಅಮ್ಮನ ಮಮತೆ ಅವರನ್ನು ಇನ್ನಷ್ಟು ಬಲಿಷ್ಟರನ್ನಾಗಿಸುತ್ತಿತ್ತು.
ಆದರಿಂದು ಏನಾಗಿದೆ?
ಬೆಳಗಾಗೆದ್ದರೆ ಸ್ಕೂಲ್‌ಗೆ ಹೊರಡುವ ತರಾತುರಿ, ಸಂಜೆ ಮನೆಗೆ ಬಂದು ಬ್ಯಾಗ್ ಕಳಚಿಟ್ಟರೆ ಮತ್ತೆ ಟ್ಯೂಷನ್ನು ಅದು ಮುಗಿಸಿದರೆ ಹೋಂ ವರ್ಕು, ಬಳಿಕ ಕಂಪ್ಯೂಟರು, ಮಕ್ಕಳು ಇನ್ನಷ್ಟು ಜಾಣರಾಗಲು ಕರಾಟೆ, ಸಂಗೀತ, ನೃತ್ಯ, ಸೋರ್ಟ್ಸು, ಕೋಚಿಂಗು...
ಹಾಗಂತ ಇದು ತಪ್ಪು, ಹೀಗೆ ಮಾಡಬಾರದು ಎನ್ನಲು ಸಾಧ್ಯವಿಲ್ಲ. ಏಕೆಂದರೆ ಇಂದಿರುವುದು ಸ್ಪರ್ಧಾತ್ಮಕ ಜಗತ್ತು. ಇಲ್ಲಿ ಸ್ಪರ್ಧೆ ಇದ್ದರೆ ಮಾತ್ರ ಗೆಲುವು. ಯಾವುದೇ ಮಗುವಿನ ಹೆತ್ತವರು ತಮ್ಮ ಮಗು ಬದುಕಿನಲ್ಲಿ ಸೋಲಲಿ ಎಂದು ಬಯಸಲಾರರು. ಹಾಗಾಗಿ ಈ ಕಸರತ್ತೂ ಅನಿವಾರ್ಯವೇ...
ಇಂದು ನಮ್ಮ ಸುತ್ತ ಜರಗುವ ವಿದ್ಯಮಾನಗಳು ಕೂಡಾ ಮಕ್ಕಳ ಮನಸ್ಸು ದುರ್ಬಲಗೊಳಿಸಲು ಕಾರಣವಾಗುತ್ತಿದೆ. ಜಗತ್ತು ಓಡುತ್ತಿರುವ ವೇಗಕ್ಕೆ ಸಹಜವಾಗಿಯೇ ಕೆಲವು ಮಕ್ಕಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅಂತವರನ್ನು ಪಕ್ಕನೆ ಗುರುತಿಸುವುದೂ ಸಾಧ್ಯವಿಲ್ಲ. ಕೇವಲ ಇಂತಹಾ ಘಟನೆಗಳಿಂದಷ್ಟೇ ಗೊತ್ತಾಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ.
ಮಕ್ಕಳಿಗೆ ಮುಖ್ಯವಾಗಿ ಪ್ರೀತಿಯ ಅವಶ್ಯಕತೆಯಿರುತ್ತದೆ. ಮಾರ್ಗದರ್ಶನ ಬೇಕಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವ ಸ್ವಾತಂತ್ರ್ಯ ಬೇಕಿರುತ್ತದೆ.
ಮೆಟ್ಟಿಲನ್ನು ನಿಧಾನವಾಗಿ ಏರಲು ಯತ್ನಿಸುವ ಮಗುವಿಗೆ, ಇನ್ನೊಂದು ಸ್ಟೆಪ್ ಹತ್ತು ಮಗು ನಾನಿದ್ದೀನಿ ಅನ್ನೋ ತಂದೆಯ ಧೈರ್ಯದ ಮಾತು, ಜೋಪಾನ ಕಣೋ ಹುಷಾರು ಎನ್ನುವ ತಾಯಿಯ ಕಾಳಜಿ, ವೆರಿಗುಡ್... ವೆರಿಗುಡ್... ಎನ್ನುವ ತಾತನ ಪ್ರೋತ್ಸಾಹ ಹೇಗೆ ಸರಸರನೆ ತುದಿ ತಲುಪಲು ಹುಮ್ಮಸ್ಸು ನೀಡುತ್ತದೋ ಹಾಗೆಯೇ ಇಂದಿನ ಮಕ್ಕಳಿಗೆ ಎಲ್ಲಿ ಏನು ಕೊರತೆಯಾಗಿದೆ ಎಂಬ ಬಗ್ಗೆ ಪೋಷಕರು ಚಿಂತಿಸಿ, ಗುರುತಿಸಿ ಅವರಲ್ಲಿ ಧೈರ್ಯ, ಹುರುಪು ತುಂಬಿದರೆ ಖಂಡಿತವಾಗಿಯೂ ಇಂತಹಾ ಕೃತ್ಯಗಳು ಮರುಕಳಿಸದಂತೆ ತಡೆಯಬಹುದು.

ನಾವೆ ಸಾಗುತ್ತಿದೆ... ಮುಂದೆಲ್ಲೋ ಸುಂದರ ತೀರ ಸಿಕ್ಕೀತೆಂಬ ನಿರೀಕ್ಷೆಯಲ್ಲಿ!

internet image
ಆಸೆಗಳು ಅದೆಷ್ಟೋ ಇದ್ದವು...
ಹೆಗಲಿಗೆ ಸ್ಟೆತಾಸ್ಕೋಪ್ ಇಳಿಬಿಟ್ಟುಕೊಂಡು ತಿರುಗುತ್ತಿದ್ದವರನ್ನು ಕಂಡಾಗ ಡಾಕ್ಟರಾಗಬೇಕು ಅಂತನಿಸಿತ್ತು.
ಗ್ರಾಫು, ಸ್ಕೇಲು, ಪೆನ್ಸಿಲ್‌ಗಳ ನಡುವೆ ಕಳೆದುಹೋಗುವವರನ್ನು ಕಂಡಾಗ ಇಂಜಿನಿಯರ್ ಆಗಬೇಕು ಅಂತನಿಸಿತ್ತು. ಬದುಕಿಡೀ ಗೌರವ ಪಡೆದುಕೊಳ್ಳುವ ಮೇಸ್ಟ್ರರನ್ನು ಕಂಡು ನಾನೂ ಮೇಷ್ಟ್ರಾಗಬೇಕು ಅಂತನಿಸಿತ್ತು.
ಹೊಗೆ ಉಗುಳುತ್ತಾ ಸಾವಿರಾರು ಮಂದಿಯನ್ನು ಅಮ್ಮನ ಮಡಿಲಿನಂತೆ ಕೂರಿಸಿಕೊಂಡು ಕರೆದೊಯ್ಯುವ ರೈಲು ಕಂಡಾಗಲೆಲ್ಲಾ ಅದರ ಚಾಲಕನಾಗಬೇಕು ಅಂತ ಅನಿಸಿತ್ತು.
ಆದರೆ ಅದಾವುದೂ ಸಾಧ್ಯವಾಗಲೇ ಇಲ್ಲ.!
ಹಾಗಂತ ಆ ಬಗ್ಗೆ ನನ್ನನ್ನು ಯಾವ ದುಃಖವೂ ಕಾಡಿಲ್ಲ.
ಯಾಕೆಂದರೆ ನನಗೆ ಗೊತ್ತು. ಬದುಕೆನ್ನುವುದೇ ಹಾಗೆ. ನಾವೆ ಹತ್ತಿದ ಮೇಲೆ ನಮ್ಮ ಕೆಲಸ ಮುಗಿಯಿತು. ಅದ್ಯಾವ ಹೊತ್ತೋ? ಅದ್ಯಾವ ದಡವೋ? ಅದ್ಯಾವ ಸುಳಿಯೋ? ಬರೀ ಅದಕ್ಕಷ್ಟೇ ಗೊತ್ತು.
ಮೊನ್ನೆ ರೆಸ್ಟೊರೆಂಟೊಂದರಲ್ಲಿ ಕಿವಿಗೆ ಬಿದ್ದ ಮಾತಿದು.
’ಇಬ್ಬರು ಮಕ್ಕಳನ್ನು ಕಣ್ಣರೆಪ್ಪೆಯಂತೆ ಸಾಕಿದೆ. ಪ್ರೀತಿ, ಕಾಳಜಿ, ವಿದ್ಯೆ ಎಲ್ಲಾ ಕೊಟ್ಟೆ, ನನಗೀಗ ಎಪ್ಪತ್ತರ ಆಸುಪಾಸು. ಒಬ್ಬ ಮಗನೇನೋ ಉದ್ಯೋಗದಲ್ಲಿದ್ದಾನೆ. ಇನ್ನೊಬ್ಬನಿಗೆ ಉದ್ಯೋಗವೂ ಇಲ್ಲ. ಜವಾಬ್ದಾರಿಯೂ ಇಲ್ಲ. ಅವನ ಸ್ವಭಾವವೇ ವಿಚಿತ್ರ. ದುಡ್ಡನ್ನೇ ಜಗತ್ತು ಅಂತ ನಂಬಿದ್ದಾನೆ, ನಿತ್ಯ ದುಡ್ಡು... ದುಡ್ಡು... ದುಡ್ಡಷ್ಟೇ, ಅದಕ್ಕಾಗಿ ಏನು ಮಾಡಲೂ ಸಿದ್ಧ. ನಿಜಕ್ಕೂ ತುಂಬಾ ಕ್ರೂರ ಸ್ವಭಾವ ಆತನದು. ಇನ್ನೊಬ್ಬನಿಗೆ ಅವನದೇ ತಾಪತ್ರಯ. ನನಗಂತೂ ಮುಂದೆ ವೃದ್ಧರ ಆಶ್ರಮವೇ ಗತಿ ಅನಿಸುತ್ತದೆ...’
ಒಬ್ಬ ತಾಯಿ ತನ್ನ ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬಾಕೆಯಲ್ಲಿ ದುಗುಡ ಹೇಳಿಕೊಳ್ಳುತ್ತಿದ್ದಳು. ಪಕ್ಕದಲ್ಲಿದ್ದಾಕೆ ಈ ಸಂಕಷ್ಟಕ್ಕೆ ನೂರೆಂಟು ಸಲಹೆ ನೀಡಿದರಾದರೂ ಯಾಕೋ ಆ ತಾಯಿ ಮನಸ್ಸು ಸಮಾಧಾನಗೊಂಡಂತೆ ಕಾಣಲಿಲ್ಲ.
ಮಾತು ಮುಂದುವರಿಯುತ್ತಲೇ ಇತ್ತು...
ಅಂದು ಕಚೇರಿಗೆ ವಾಪಸ್ಸಾದೆನಾದರೂ ಮನಸ್ಸಿಗೆ ಸಮಾಧಾನವಿರಲಿಲ್ಲ. ಕಿವಿಗಳಲ್ಲಿ ಆ ವೃದ್ಧೆಯ ಮಾತುಗಳೇ ಪ್ರತಿಧ್ವನಿಸುತ್ತಿತ್ತು. ಈ ಬಗ್ಗೆ ಯಾರಲ್ಲಾದರೂ ಚರ್ಚಿಸಲೇಬೇಕು ಅಂದುಕೊಂಡೆ. ಕಾಕತಾಳೀಯವೋ ಎಂಬಂತೆ ಸಂಜೆ ಪರಿಚಯದ ಮನೋವೈದ್ಯರೊಬ್ಬರು ಸಿಕ್ಕಿದರು.
ಹೌದು, ಅವರ ಮಗನಿಗಿರುವುದು ಖಾಯಿಲೆ.
Anti-Social or Psychopathic Personality Disorder ಖಾಯಿಲೆಯ ಹೆಸರು.
ಸ್ವಾರ್ಥಿಯಾಗಿರುವುದು ಇದರ ಮೊದಲ ಲಕ್ಷಣ. ತಮ್ಮ ಸುಖವನ್ನಷ್ಟೇ ಯೋಚಿಸುವ ಇವರು ಅದಕ್ಕಾಗಿ ಯಾರನ್ನು ಬಲಿಕೊಡಲೂ ಸಿದ್ಧರಾಗಿರುತ್ತಾರೆ. ತನ್ನ ಕುಟುಂಬ, ಸಂಬಂಧಗಳು, ಸಂಬಂಧಿಕರು, ಸಮಾಜ, ಅದರ ರೀತಿ ನೀತಿಗಳಿಗೆ ಇವರಲ್ಲಿ ಕವಡೆ ಕಿಮ್ಮತ್ತಿನ ಬೆಲೆಯಿಲ್ಲ. ಮೇಲ್ನೋಟಕ್ಕೆ ಸಭ್ಯ, ಸಜ್ಜನ ವ್ಯಕ್ತಿತ್ವ. ಆದರದು ಬರೀ ನಟನೆಯಷ್ಟೆ. ಸ್ನೇಹಿತರ ಗುಂಪೇ ಜೊತೆಗೆ ಇರುತ್ತಿದ್ದರೂ ಯಾರನ್ನೂ ಕ್ಷಣಕಾಲಕ್ಕೆ ನಂಬುವವರಲ್ಲ. ಟೀಕೆ, ಬೈಗುಳ, ಪೆಟ್ಟು... ಊಹೂಂ, ಇದ್ಯಾವುದಕ್ಕೂ ಜಗ್ಗುವವರಲ್ಲ. ಅದರ ಭಯವೂ ಇವರಿಗಿಲ್ಲ. ಪ್ರತಿಯೊಂದರಲ್ಲೂ ಲಾಭವನ್ನೇ ಹುಡುಕುವ ಜಾಯಮಾನ ಇವರದು. ಒಟ್ಟಿನಲ್ಲಿ ಸುಲಭಕ್ಕೆ ಬದಲಾಯಿಸಬಹುದಾದ ವ್ಯಕ್ತಿತ್ವ ಇವರದಲ್ಲ...
ಅವರು ಹೇಳುತ್ತಿದ್ದರೆ ಮನಸ್ಸು ಅದಾಗಲೇ ಲೆಕ್ಕಾಚಾರದಲ್ಲಿ ಮುಳುಗಿತು.
ಒಂದಿಷ್ಟು ಹೊತ್ತು ಮೌನದ ಬಳಿಕ ಕೇಳಿದೆ, ಇದಕ್ಕೆ ಪರಿಹಾರವೇ ಇಲ್ಲವಾ?
ಅವರೆಂದರು, ಈ ವ್ಯಕ್ತಿತ್ವ ಒಂದೆರಡು ದಿನಗಳಲ್ಲಿ ರೂಪುಗೊಳ್ಳುವಂತದ್ದಲ್ಲ. ಒಬ್ಬಾತನಿಗೆ ಈ ತೊಂದರೆ ಇದೆ ಅಂತ ಗೊತ್ತಾದರೆ ಶೀತ, ಜ್ವರದಷ್ಟು ಮಾಮೂಲಿಯಾಗಿ ವಾಸಿ ಮಾಡಲು ಇದಕ್ಕೆ ಯಾವುದೇ ಔಷಧಿಗಳಿಲ್ಲ. ತನ್ನಲ್ಲಿ ಸಮಸ್ಯೆಯಿದೆ, ತಾನು ಬದಲಾಗಬೇಕು ಎಂದು ರೋಗಿಗೆ ಅನಿಸಿದರೆ ಅದಕ್ಕೆ ಪೂರಕವಾಗಿ ಜೊತೆಗಿರುವವರ ಕಾಳಜಿ, ಪ್ರೋತ್ಸಾಹ ಸಿಕ್ಕಿದರೆ, ನಿಧಾನವಾಗಿ ನಿಯಂತ್ರಣಕ್ಕೆ ತರಬಹುದು. ಮೊದಲು ರೋಗಿಯ ವ್ಯಕ್ತಿತ್ವದಲ್ಲಿರುವ ದೋಷ ಗುರುತಿಸುವ ಕೆಲಸವಾಗಬೇಕು. ನಂತರ ಅವುಗಳದ್ದೊಂದು ಪಟ್ಟಿ ಮಾಡಬೇಕು. ಇವು ಯಾವ ಸನ್ನಿವೇಶ, ಸಂದರ್ಭಗಳಲ್ಲಿ ಅನಾವರಣಗೊಳ್ಳುತ್ತದೆ ಅನ್ನುವುದನ್ನು ಗಮನಿಸಬೇಕು. ಅದಕ್ಕೆ ಕಾರಣವಾಗುವ ಅಂಶಗಳೇನು ಎಂಬುದು ಗೊತ್ತಾಗಬೇಕು. ನಂತರ ಮನಃಶಾಸ್ತ್ರಜ್ಞರು, ಮನೋವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ನೂರಕ್ಕೆ ನೂರು ಆತ ಸರಿಯಾದ ಅಂತೇನೂ ಹೇಳಲು ಬರುವುದಿಲ್ಲ...
ಹಾಗಂದ ಡಾಕ್ಟರು ನಕ್ಕು ನನ್ನ ಮುಖ ನೋಡಿದರು.! ನಾನು, ಇಲ್ಲ ಸುಮ್ನೆ ತಿಳ್ಕೊಳೋಣಾಂತ ಕೇಳಿದೆ ಎಂದು ಹೇಳಿ ಮಾತು ಬದಲಾಯಿಸಿದೆ.
ಇಂತಹಾ ಪ್ರಕರಣಗಳನ್ನು ನಾನೂ ಕಂಡಿದ್ದೇನೆ. ಒಬ್ಬನ ಖರಾಬ್ ವ್ಯಕ್ತಿತ್ವದಿಂದಾಗಿ ಒಂದು ಕುಟುಂಬದ ಅದಷ್ಟೂ ಮಂದಿ ಏನೇನೆಲ್ಲಾ ಪಡಿಪಾಟಲು ಪಡಬೇಕು ಅನ್ನುವುದರ ಅರಿವಿದೆ. ಇಲ್ಲಿ ಪ್ರಶ್ನೆ ಮೂಡುವುದೆಂದರೆ ಒಬ್ಬಾತ ಹೀಗಾಗಲು ಕಾರಣವೇನು? ಇಲ್ಲಿ ತಪ್ಪು ಯಾರದ್ದು?
ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದವಿರಬಹುದು. ಆದರೆ ಒಬ್ಬ ಇಂತಹಾ ವ್ಯಕ್ತಿಯಿರುವ ಮನೆಯಲ್ಲಿರುತ್ತದಲ್ಲಾ ಅಶಾಂತಿ? ಅದು ಮಾತ್ರ ನಿಜಕ್ಕೂ ಘೋರ.
ಪಾಪ... ಈ ವೃದ್ಧೆಯದ್ದೂ ಅದೇ ಕಥೆಯಿರಬೇಕು. ಆಕೆಯನ್ನು ಕಂಡಾಗ ತೀರಾ ಸ್ಥಿತಿವಂತರಂತೆ ಕಾಣಿಸಲಿಲ್ಲ. ಹಾಗಾಗಿ ಸಹಜವಾಗಿಯೇ ಆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿರುವುದು ನಿಚ್ಚಳ. ಆಕೆಗೊಂದಿಷ್ಟು ಆದಾಯವಿದ್ದರೆ ಸರಿ. ಇಲ್ಲವಾದರೆ? ಸಂಸಾರದ ನೊಗ ಬೀಳುವುದು ಇನ್ನೊಬ್ಬ ಮಗನ ಕುತ್ತಿಗೆಗೆ. ಆತನಾದರೋ ಉತ್ತಮ ಉದ್ಯೋಗದಲ್ಲಿದ್ದರೆ ಸರಿ. ಇಲ್ಲವಾದರೆ?
ಉತ್ತಮ ಉದ್ಯೋಗದಲ್ಲೇ ಇದ್ದಾನೆ ಅಂತಾನೇ ಅಂದುಕೊಳ್ಳೋಣ. ಉತ್ತಮ ಉದ್ಯೋಗವೆಂದರೆ ಜವಾಬ್ದಾರಿಗಳೂ ಬೆಟ್ಟದಷ್ಟಿರುತ್ತದಲ್ಲವೇ? ಇಂದು ಪ್ರತೀ ಕಂಪನಿಗಳೂ ಇನ್ನೊಂದು ಕಂಪನಿ ಜೊತೆ ಜಿದ್ದಿಗೆ ಬಿದ್ದಿರುತ್ತದಾದ್ದರಿಂದ ಸಹಜವಾಗಿಯೇ ತಮ್ಮ ಕಂಪನಿ ನಂ.೧ ಆಗಿಸುವ ಜವಾಬ್ದಾರಿ ಇರುತ್ತದೆ. ಈ ಜವಾಬ್ದಾರಿ, ಒತ್ತಡಗಳನ್ನು ಉದ್ಯೋಗಿಗಳ ಮೇಲೆ ಅನಿವಾರ್ಯವಾಗಿ ಹೇರಲಾಗುತ್ತದೆ. ದಿನಪೂರ್ತಿ ಕೆಲಸದ ಒತ್ತಡದ ನಡುವೆ ಕಳೆದ ಆತ ಒಂದಿಷ್ಟು ವಿಶ್ರಾಂತಿಗೆಂದು ಮನೆ ಸೇರಿದರೆ ಬರೀ ಹಣ.. ಹಣ... ಹಣ.. ಎಂಬ ಅಕ್ಷರಗಳು, ಜಗಳಗಳು ಕಿವಿಗೆ ಬಿದ್ದರೆ, ಮಾನಸಿಕ ಅಶಾಂತಿಗೆ ಬಿದ್ದು, ಆತ ತನ್ನ ಉದ್ಯೋಗ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವೇ?
ಒಂದೆಡೆಯಲ್ಲಿ ರೋಗಿಯ ಈ ವಿಲಕ್ಷಣ ವರ್ತನೆಗಳಿಗೆ ಬೇಸತ್ತು ಸಂಬಂಧಿಕರು ಮೈಲಾಚೆಗೆ ನಡೆದುಬಿಟ್ಟಿರುತ್ತಾರೆ, ಮನೆಯ ಆರ್ಥಿಕ ಸ್ಥಿತಿಗತಿ ಎಕ್ಕುಟ್ಟಿ ಹೋಗಿರುತ್ತದೆ. ನೆಮ್ಮದಿಗಳೇ ಇಲ್ಲದೆ ಭವಿಷ್ಯ ಕತ್ತಲಾಗಿರುತ್ತದೆ.
ಖುದ್ದು ರೋಗಿಗೇ ತಾನು ಸರಿಯಾಗಬೇಕು ಎಂಬ ಇಚ್ಛೆ ಇಲ್ಲವಾದ್ದರಿಂದ ಚಿಕಿತ್ಸೆ ಕೊಡಿಸುವುದೂ ಸಾಧ್ಯವಿಲ್ಲ. ಪಲಾಯನವಾದ ಎಲ್ಲರ ಮನಸ್ಥಿತಿಗೆ ಒಗ್ಗುವುದಿಲ್ಲವಾದ್ದರಿಂದ ಎಲ್ಲಾ ಬಿಟ್ಟು ಹೊರಟುಬಿಡೋಣ ಎನ್ನುವುದೂ ಸಾಧ್ಯವಿಲ್ಲ. ಒಂದೆಡೆ ವೃದ್ಧ ತಾಯಿ, ಇನ್ನೊಂದೆಡೆ ವಿಕೃತ ಸ್ವಭಾವದ ಸಹೋದರ, ದೂರವಾಗಿರುವ ಬಂಧುಗಳೆಂಬ ಮಹಾಶಯರು... ಆತ ಕಂಗಾಲಾಗಲು ಇನ್ನೇನಾದರೂ ಬೇಕೇ ?
ಒಟ್ಟಿನಲ್ಲಿ ಆ ಕುಟುಂಬದ ಚಿತ್ರಣ ವೃದ್ಧೆ ಹೇಳಿದಂತೆ ನಿಜಕ್ಕೂ ಕಳವಳಕಾರಿಯೇ!
ಮತ್ತೆ ಆಲೋಚಿಸಿದೆ.
ಈ ಬದುಕು ಎಷ್ಟೊಂದು ವೈಚಿತ್ರ್ಯ ಹೊಂದಿದೆ ಎಂದು ಅಚ್ಚರಿಯಾಯಿತು. ತಪ್ಪು ಮಾಡುವವರು ಯಾರೋ, ಅದಕ್ಕೆ ಕಂದಾಯ ಕಟ್ಟುವವರು ಯಾರೋ! ಪರಿತಪಿಸುವವರು ಇನ್ಯಾರೋ. ಛೇ ಬದುಕಿಗೊಂದು ಅರ್ಥವೇ ಇಲ್ಲವಾ? ಅನಿಸಿತು. ತಕ್ಷಣವೇ ನನ್ನ ಬದುಕನ್ನೊಮ್ಮೆ ಅವಲೋಕಿಸಿದೆ....
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ... ನನ್ನ ಆಸೆಗಳನ್ನು ನೆನೆದು ನಗು ಬಂತು. ಅಲ್ಲಿ ಅಂದುಕೊಂಡಿದ್ದು ಮಾತ್ರ ಆಗಿಲ್ಲ ಅನ್ನುವುದು ಬಿಟ್ಟರೆ ಮತ್ತೆಲ್ಲಾ ಓಕೆಯಾಗಿತ್ತು... ಜುಟ್ಟಿಗೆ ಮಲ್ಲಿಗೆ ಹೂವಿಲ್ಲದಿದ್ದರೂ, ಹೊಟ್ಟೆಗೆ ಹಿಟ್ಟಂತೂ ಖಂಡಿತಾ ಇತ್ತು.
ಅಂತೂ ಇಂತೂ ಬದುಕೆಂಬ ನಾವೆ ಮುಂದಕ್ಕೆ ಸಾಗುತ್ತಾ ಇದೆ... ಚಿಂತೆ ಇಲ್ಲದೆ ನೆಮ್ಮದಿಯಾಗಿ ಕೂತಿದ್ದೇನೆ.
ಸುಂದರ ತೀರವೊಂದು ಸಿಕ್ಕೀತು ಎಂಬ ನಿರೀಕ್ಷೆಯೊಂದಿಗೆ!

ಮತ್ತೆ ನೆನಪಾದ ಮಾಯಾವಿ!

internet image
ಅಂದು ನಮಗೆಲ್ಲಾ ಎಲ್ಲಿಲ್ಲದ ಸಂಭ್ರಮ!
ಮಾವ ಮನೆಗೆ ಭಾರೀ ಗಾತ್ರದ ಪೆಟ್ಟಿಗೆಯೊಂದನ್ನು ಏದುಸಿರುಬಿಡುತ್ತಾ ಹೊತ್ತು ತಂದಿದ್ದ.
ಅದೇನು? ನಮಗಾಗ ಬಿಲಿಯನ್ ಡಾಲರ್ ಪ್ರಶ್ನೆ. ನಮ್ಮ ಪಿಕಲಾಟದ ನಡುವೆಯೂ ಅದನ್ನು ಮೆಲ್ಲನೆ ರಟ್ಟಿನ ಬಾಕ್ಸ್ ನಿಂದ ಹೊರತೆಗೆದ ಆತ, ಎತ್ತರದ ಕಪಾಟಿನ ಮೇಲಿರಿಸಿ ಅದರ ಹಿಂಬದಿಯಿಂದ ದಾರವೊಂದನ್ನು ಮನೆಯ ಮಾಡಿನಲ್ಲಿ ಕಟ್ಟಿ ಒಳಬಂದು ಅದರಲ್ಲಿದ್ದ ಗುಂಡಿಯೊಂದನ್ನು ಅದುಮಿದ್ದ. ಮೊದಲಿಗೆ ಗರಗರ..ಗುರುಗುರು..ಅನ್ನುತ್ತಲೇ ಶುರವಾದ ಸ್ವರ ಮತ್ತೆ ಮೆಲ್ಲನೆ ಲಯ ಕಂಡುಕೊಂಡು ಚಿತ್ರಗೀತೆ ಹಾಡಲಾರಂಭಿಸಿತು. ಕೂತೂಹಲ ತಾಳಲಾರದೆ  ಕೇಳಿದಾಗ ಮಾವ ಅದನ್ನು ಪರಿಚಯ ಮಾಡಿಕೊಟ್ಟದ್ದು ಅದು ರೋಡಿಯೋ ಎಂದು!
ನನ್ನ ಸ್ಮೃತಿ ಪಟಲದಲ್ಲಿ ರೇಡಿಯೋ ಎಂಬ ವಸ್ತು ದಾಖಲುಗೊಂಡಿದ್ದು ಹಾಗೆ!
ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನಮ್ಮೂರು ಇಂದಿನಂತೆ ಆಧುನಿಕತೆಗೆ ತೆರೆದುಕೊಂಡಿರಲಿಲ್ಲ. ಆಗೆಲ್ಲಾ ಮನರಂಜನೆಗೆ ರೇಡಿಯೋವೇ ಸಂಗಾತಿ. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಟೀವಿ ಇತ್ತಾದರೂ ಅದನ್ನೂ ಕಿಟಕಿಯಿಂದ ನೋಡುವುದೂ ನಮಗೆಲ್ಲ ಸಾಧ್ಯವಿರಲಿಲ್ಲ. ಆಗೇನಿದ್ದರೂ ಗಜಗಾತ್ರದ ರೇಡಿಯೋಗಷ್ಟೇ ಅಗ್ರಪೂಜೆ!
ಅಷ್ಟೇ ಅಲ್ಲ ಆಗ ಇಂದಿನಂತೆ ಆ ಎಫ್‌ಎಮ್ಮು, ಈ ಎಫ್‌ಎಮ್ಮು ಅಂತೆಲ್ಲಾ ಇದ್ದಿರಲಿಲ್ಲ. ಇದ್ದುದು ಒಂದೇ... ಅದು ಆಕಾಶವಾಣಿ. ವಿಚಿತ್ರ ಸದ್ದಿನ ನಡುವೆ ರೇಡಿಯೋದಲ್ಲಿ ಕೇಳಿಬರುತ್ತಿದ್ದ ವಾರ್ತೆ, ಚಿತ್ರಗೀತೆ, ಕೃಷಿರಂಗ... ಇಡೀ ಊರಿಗೆ ಅದ್ಭುತ ಮನರಂಜನೆ ನೀಡುವ ಸಂಗತಿಗಳಾಗಿದ್ದವು.
ಸುದ್ದಿಗಳ ಗಂಧಗಾಳಿಯೂ ಸುಳಿಯದ ನಮ್ಮೂರಿನಲ್ಲಿ ಆಗೆಲ್ಲಾ ರೋಡಿಯೋದಲ್ಲಿ ಬರುವ ವಾರ್ತೆಗಳೇ ಸಂಜೀವಿನಿ! ಅದರಲ್ಲಿ ಕೇಳುವ ಸುದ್ದಿಗಳೇ ನಂತರದ ಹೊತ್ತುಗಳಲ್ಲಿ ಗದ್ದೆ, ತೋಟ, ಹೊಟೇಲು, ಆಮ್ಲೇಟ್ ಅಂಗಡಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಯ ವಸ್ತುಗಳಾಗುತ್ತಿದ್ದವು. ಸಂಜೆ ಕೇಳಿಬರುತ್ತಿದ್ದ ಚಿತ್ರಗೀತೆಗಳು, ಬುಧವಾರದ ಯಕ್ಷಗಾನ, ಕೃಷಿಕರಿಗೆ ಅಡಿಕೆ ಧಾರಣೆ, ಯುವಕರಿಗೆ ಯುವವಾಣಿ, ಸಂಸ್ಕೃತವಾರ್ತೆ, ಕೆಂಚನ ಕುರ್‍ಲ್ಲರಿ... ಹೀಗೆ ಸಾಕಾ, ಇನ್ನೇನಾದರೂ ಬೇಕಾ?? ಎಂದು ರೇಡಿಯೋ ನಮ್ಮನೇ ಪ್ರಶ್ನಿಸುತ್ತಿತ್ತು.
ಆಗಾಗ ಕೈಕೊಡುತ್ತಿದ್ದ ಈ ರೇಡಿಯೋವನ್ನು ರಿಪೇರಿಗಾಗಿ ಅಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದುದು, ರೀಪೇರಿಯವನು ಆ ಪೆಟ್ಟಿಗೆ ಬಿಚ್ಚುತ್ತಿದ್ದಾಗ ಅದರೊಳಗೇನಿದೆ ಎಂಬ ಸಹಜ ಕುತೂಹಲ, ಬರೀ ವಯರ್‌ಗಳು ಕೆಲವು ತಟ್ಟೆಗಳು, ಹೇಗೆ ಅಷ್ಟೇಲ್ಲಾ ಧ್ವನಿಹೊರಡಿಸುತ್ತವೆ ಎಂಬ ಅಚ್ಚರಿ... ಆಗ ನಮ್ಮದು.
ಹೀಗೆ ದಿನಗಳು ಉರುಳುತ್ತಲೇ ಇದ್ದವು. ಅದೊಂದು ದಿನ ನಮ್ಮ ರೇಡಿಯೋ ಇದ್ದಕ್ಕಿದ್ದಂತೆ ಕೈಕೊಟ್ಟಿತು. ಮತ್ತೆ ರಿಪೇರಿಯವನ ಆಗಮನವಾಯಿತು. ಅದನ್ನು ನಾಲ್ಕು ಜನ ಎತ್ತಿ ಮೆಲ್ಲನೆ ಅಟೋ ರಿಕ್ಷಾದೊಳಗಿಟ್ಟು ಅದೆಲ್ಲಿಗೋ ಹೊರಟು ಹೋದರು. ರಿಪೇರಿ ಆಯಿತಾ? ಇಲ್ಲವಾ? ಗೊತ್ತಾಗಲಿಲ್ಲ. ರೇಡಿಯೋ ಮಾತ್ರ ಮತ್ತೆ ಮನೆಗೆ ಬರಲೇ ಇಲ್ಲ.
ಇಂದು ರೇಡಿಯೋ ಇದ್ದ ಜಾಗದಲ್ಲಿ ಟೀವಿ ಬಂದು ಕೂತಿದೆ. ಚಿತ್ರಗೀತೆ, ವಾರ್ತೆ ಅದರಲ್ಲೂ ಬರುತ್ತಿದೆ. ಚಿತ್ರ ಸಮೇತ! ಕಣ್ಣಿಗೆ ಕಾಣದ ಈ ಮಾಯಾವಿ ಮಾತ್ರ ನನ್ನ ಮೊಬೈಲ್ ಫೋನ್‌ಗಷ್ಟೇ ಸೀಮಿತಗೊಂಡಿದೆ.
ಎಷ್ಟಾದರೂ ಬದಲಾವಣೆ ಜಗದ ನಿಯಮ ಅಲ್ಲವೇ!

ಆಕೆ ಮತ್ತೊಮ್ಮೆ ಓಡೋಡಿ ಬರುವ ಹೊತ್ತು...

internet image
ಕೈಯಲ್ಲಿ ಕಟ್ಟಿದ ರಾಖಿ ಇನ್ನೂ ಬಣ್ಣ ಕೂಡಾ ಮಾಸಿಲ್ಲ. ಆಗಲೇ ಮತ್ತೆ ರಾಖಿಹಬ್ಬ ಬಂದೇಬಿಟ್ಟಿದೆ.
ನಿನ್ನೆ ಮೊನ್ನೆಯಷ್ಟೇ ಮುದ್ದಿನ ತಂಗಿ ಓಡೋಡಿ ಬಂದು ಕೈಗೊಂದು ರಾಖಿ ಕಟ್ಟಿ ಮುಗುಳ್ನಕ್ಕ ನೆನಪು. ಈಗ ಅವಳು ಮತ್ತೆ ರಾಖಿ ಹಿಡಿದು ಬರುವ ಸರದಿ.
ದಿನಗಳು ಅದೆಷ್ಟು ಬೇಗನೇ ಉರುಳಿ ಹೋಗುತ್ತವಲ್ಲವೇ?
ರಾಖಿ ಹಬ್ಬದಂದು ಬಣ್ಣ ಬಣ್ಣದ ರಾಖಿ ಕಟ್ಟಿ ಖುಷಿಪಡುವ ಹೆಚ್ಚಿನ ಮಂದಿಗೆ ಹಬ್ಬದ ಹಿನ್ನೆಲೆ ಖಂಡಿತಾ ಗೊತ್ತಿರಲಾರದು. ನಮ್ಮ ಸಂಸ್ಕೃತಿಯಲ್ಲಿ ಸಹೋದರ-ಸಹೋದರಿ ಸಂಬಂಧಕ್ಕೆ ಪವಿತ್ರವಾದ ಸ್ಥಾನ ನೀಡಲಾಗಿದೆ. ಇದನ್ನು ಮತ್ತೆ ಮತ್ತೆ ನೆನಪಿಸುವ ಉದ್ದೇಶ ಈ ಹಬ್ಬದ್ದು. ರಾಖಿ ಕಟ್ಟಿಸಿಕೊಂಡ ಸಹೋದರನಿಗೆ ರಾಖಿ ಕಟ್ಟಿದ ಸಹೋದರಿಯನ್ನು ರಕ್ಷಿಸುವ ಹೊಣೆಯಿರುತ್ತದೆ. ಇತಿಹಾಸ ಕೆದಕಿದರೆ ರಜಪೂತರ ಕಾಲದಲ್ಲಿ ಈ ಹಬ್ಬ ಅತ್ಯಂತ ಮಹತ್ವ ಪಡೆದುಕೊಂಡಿದ್ದುದು ಕಂಡುಬರುತ್ತದೆ.
ರಾಖಿ ಹಬ್ಬದಂದು ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಸಂಭ್ರಮವೇ. ಕರಾವಳಿಯಲ್ಲಂತೂ ವಿವಿಧ ಸಂಘ, ಸಂಸ್ಥೆಗಳು ಮುತುವರ್ಜಿ ವಹಿಸಿ ಸಾಮೂಹಿಕವಾಗಿ ರಾಖಿ ಹಬ್ಬವನ್ನು ಆಚರಿಸಿಕೊಳ್ಳುತ್ತವೆ. ಪ್ರತೀ ವರ್ಷ ಆಚರಿಸಲ್ಪಡುವ ರಾಖಿ ಹಬ್ಬ ಅಥವಾ ರಕ್ಷಾ ಬಂಧನ ಸಹೋದರ ಸಹೋದರಿಯರ ಪವಿತ್ರ ಸಂಬಂಧದ ದ್ಯೋತಕ. ಈ ದಿನದಂದು ಸಹೋದರ-ಸಹೋದರಿಯರು ಎಲ್ಲೇ ಇದ್ದರೂ ಪರಸ್ಪರ ನೆನಪಿಸಿಕೊಳ್ಳುತ್ತಾರೆ.
ಅಂದಹಾಗೆ ಈ ಬಂಧನಕ್ಕೊಳಪಡಲು ಒಡಹುಟ್ಟಿದ ಸೋದರ-ಸೋದರಿಯರೇ ಆಗಬೇಕೆಂದೇನೂ ಇಲ್ಲ. ವರ್ಷಂಪ್ರತಿ ಅದೆಷ್ಟೋ ಮಂದಿಯನ್ನು ಈ ಹಬ್ಬ ಪರಸ್ಪರ ಸಹೋದರತೆಯ ಬಂಧ ಬೆಸೆದ ಉದಾಹರಣೆಗಳಿವೆ. ರಾಖಿ ಹಬ್ಬದಂದು ಸಹೋದರಿಯು ಸಹೋದರನ ಕೈಗೆ ರಾಖಿ ಕಟ್ಟಿ ತನ್ನ ಪ್ರೀತಿ ತೋರಿಸಿಕೊಳ್ಳುತ್ತಾಳೆ. ಸಹೋದರನೂ ಅಷ್ಟೇ ಆಕೆಯ ಪ್ರೀತಿಗೆ ಬದ್ಧನಾಗಿ ಸದಾ ಆಕೆಯ ಮಾನ, ಪ್ರಾಣಗಳಿಗೆ ರಕ್ಷಣೆ ಕೊಡುವ ಬದ್ಧತೆಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ. ಆಕೆಯ ಬಾಯಿಗೆ ಸಿಹಿ ಇಟ್ಟು ಉಡುಗೊರೆಯನ್ನೂ ಕೊಡುತ್ತಾನೆ.
ಈ ಹಬ್ಬ ಸಮೀಪಿಸಿತೆಂದರೆ ಸಾಕು. ಎಲ್ಲಾ ಅಂಗಡಿಗಳಲ್ಲೂ ಬಣ್ಣಬಣ್ಣದ ವಿವಿಧ ಗಾತ್ರದ ರಾಖಿಗಳು ರಾರಾಜಿಸುತ್ತವೆ. ಒಂದು ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗೂ ಈ ರಾಖಿಗಳು ದೊರೆಯುತ್ತದೆ.
ಇಂದಿನ ಮಕ್ಕಳಿಗೆ ಈ ಹಬ್ಬದ ಬಗ್ಗೆ ತಿಳಿಸಿ ಹೇಳುವವರೇ ಇಲ್ಲ ಎಂಬಂತಾಗಿದೆ. ’ರಾಖಿ’ ಎಂಬುದರ ಪಾವಿತ್ರ್ಯತೆ ಏನು, ಪ್ರಾಮುಖ್ಯತೆ ಏನು ಎಂಬುದೂ ತಿಳಿಯದೆ ಕೈ ತುಂಬಾ ರಾಖಿ ಕಟ್ಟಿಕೊಂಡು ಮೆರೆಯುವವರನ್ನೂ ನಾವು ಇಂದು ಕಾಣಬಹುದು.
ಪರಸ್ಪರ ತ್ಯಾಗ, ಸಹೋದರತೆ ದೃಷ್ಟಿಯಿಂದ ರಾಖಿ ಹಬ್ಬ ಆಚರಿಸಿಕೊಂಡರಷ್ಟೇ ಅದಕ್ಕೊಂದು ನಿಜವಾದ ಸಾರ್ಥಕತೆ ಬಂದೀತು.

ಅಡಿಕೆಯ ಕಳೆ ಕಳೆದೀತು ಕೊಳೆ ರೋಗ....

ಕರಾವಳಿ ಭಾಗದ ಅಡಿಕೆ ಕೃಷಿಕರೇ ಹಾಗೆ!
ಪ್ರತೀ ಬಾರಿ ಮಳೆಗಾಲ ಅರಂಭವಾಯಿತೆಂದರೆ ಸಾಕು, ಒಂದಷ್ಟು ಭಯ, ಆತಂಕ, ನಿರೀಕ್ಷೆಯೊಂದಿಗೇ ಅವರು ವರುಣನನ್ನು ಸ್ವಾಗತಿಸುತ್ತಾರೆ. ಅದಕ್ಕೆ ಕಾರಣವೂ ಇದೆ, ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು. ವರ್ಷ ಪೂರ್ತಿ ಮಗುವಿನಂತೆ ಸಲಹಿದ ತಮ್ಮ ಬೆಳೆಗೆ, ಮಳೆ ಅದೆಲ್ಲಿ ಕಂಟಕ ತಂದಿಡುತ್ತದೋ ಎಂಬ ಪುಟ್ಟ ಭಯ ಅವರದ್ದು.
ಅಡಿಕೆ ಕೃಷಿಯನ್ನು ಬೆಂಬಿಡದೆ ಕಾಡುವ ಕೊಳೆರೋಗಕ್ಕೂ ಮಳೆಗಾಲಕ್ಕೂ ಬಿಡಿಸಲಾರದ ನಂಟು.
ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಬೆಳೆ ಅಡಿಕೆ. ಇದರಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲ. ಈ ಭಾಗದ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭ್ರದತೆ ಒದಗಿಸುವಲ್ಲಿ ಮುಖ್ಯ ಪಾತ್ರ ಈ ಅಡಿಕೆಯದ್ದೇ.
ಇಲ್ಲಿ ಸರಿಸುಮಾರು ೨೭,೬೪೫ ಹೆಕ್ಟೇರ್ ಗಳಿಗೂ ಹೆಚ್ಚಿನ ಭೂಮಿಯಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಆರ್ಥಿಕ ಸಬಲತೆಗೆ ಯೋಗ್ಯವಾದ ಬೆಳೆ ಅಂತ ಹೇಳಬಹುದಾದರೂ ಇದೇನು ಅಷ್ಟು ಸಲೀಸಾಗಿ ಬೆಳೆಯುವ ಕೃಷಿ ಪ್ರಕಾರ ಅಲ್ಲ. ಈ ಭಾಗದಲ್ಲಿ ಅನೇಕ ವರ್ಷಗಳಿಂದ ಅಡಿಕೆ ಬೆಳೆಯುತ್ತಾ ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಬದಲಾಗುತ್ತಿರುವ ಋತುಮಾನಕ್ಕೆ ಕಾಣಿಸಿಕೊಳ್ಳುತ್ತಿರುವ ಕೀಟ ಹಾಗೂ ರೋಗಗಳಿಂದಾಗಿ ಅಡಿಕೆ ಗುಣಮಟ್ಟ ಹಾಗೂ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ಈಗಂತೂ ಮಳೆಗಾಲ. ಎಲ್ಲೆಡೆ ಅಡಿಕೆಗೆ ಕೊಳೆರೋಗದ್ದೇ ಆತಂಕ. ಮಳೆ ನೀರಿಗೆ ಸಾಮಾನ್ಯವಾದ ಈ ರೋಗ ಅಡಿಕೆ ಇಳುವರಿ ಮೇಲೆ ಮಾತ್ರ ತೀವ್ರ ದುಷ್ಪರಿಣಾಮ ಬಿರುತ್ತದೆ. ಈ ರೋಗ ತೋಟವೊಂದಕ್ಕೆ ಲಗ್ಗೆ ಇಟ್ಟಿತೆಂದರೆ ಇಳುವರಿಯಲ್ಲಿ ಶೇ.೫೦ ರಿಂದ ೯೦ ರಷ್ಟು ನಷ್ಟ ಉಂಟಾಯಿತೆಂದೇ ಅರ್ಥ.
ಕೊಳೆರೋಗದ ಲಕ್ಷಣ ಏನೆಂದರೆ...
ಮೊದಲಿಗೆ ಅಡಿಕೆ ಕಾಯಿಗಳ ಮೇಲೆ ಹಚ್ಚ ಹಸಿರು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತದೆ. ನಂತರ ಇದೇ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಬಾಗದಲ್ಲೂ ಆವರಿಸಿ ನಿಧಾನಕ್ಕೆ ಕೊಳೆಯುವಂತೆ ಮಾಡುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ನೋಡನೋಡುತ್ತಲೇ ಗೊಂಚಲಿನಿಂದ ಕಳಚಿ ಉದುರಿಹೋಗುತ್ತದೆ.
ಹರಡುವಿಕೆ ಹೇಗೆ?
ಕೊಳೆರೋಗ ಫೈಟಾಪ್ರತ್ ಆರಕೆ ಎಂಬ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಂಡು ನಾಲ್ಕೈದು ದಿನಗಳಲ್ಲಿ ಶಿಲೀಂದ್ರ ಹೆಚ್ಚಿ ರೋಗ ವ್ಯಾಪಿಸತೊಡಗುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ ತೇವಾಂಶದಿಂದ ಕೂಡಿದ ವಾತಾವರಣ, ಒಟ್ಟಾಗಿ ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.
ಹತೋಟಿ ಹೇಗೆ?

ಕೊಳೆ ರೋಗ ತಗುಲಿದ ಕಾಯಿಗಳು, ಒಣಗಿದ ಗೊಂಚಲುಗಳನ್ನು ಮೊದಲು ತೆಗೆದು ನಾಶಪಡಿಸಬೇಕು. ಅಡಿಕೆ ಗೊನೆಗೆ ಪಾಲಿಥೀನ್ ಹೊದಿಕೆ ಕಟ್ಟುವುದರಿಂದಲೂ ರೋಗದ ಹತೋಟಿ ಸಾಧ್ಯ. ಮೂರು ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಪ್ರತೀ ಲೀಟರ್ ನೀರಿನಲ್ಲಿ ಅಥವಾ ಶೇಕಡಾ ಒಂದರ ಬೋರ್ಡೊ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಬಳಿಕ ೩೦ ರಿಂದ ೪೫ ದಿನಗಳ ಅಂತರದಲ್ಲಿ ಎರಡನೇ ಸಿಂಪಡಣೆ. ಒಂದು ವೇಳೆ ಮಳೆಗಾಲ ಮುಂದುವರಿದಲ್ಲಿ ಮೂರನೇ ಬಾರಿಯೂ ಸಿಂಪಡಸಬೇಕಾಗುವುದು. ರೋಗಾಣು ಮಣ್ಣಿನ ಪದರಲ್ಲೂ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಈಗಂತೂ ಕೊಳೆರೋಗ ನಿವಾರಿಸಲು, ತೋಟಗಾರಿಕಾ ಇಲಾಖೆ ’ಹಾಟ್ ಕ್ಲಿನಿಕ್’ಗಳನ್ನು ಸ್ಥಾಪಿಸಿ, ಕೃಷಿಕರ ಸಹಾಯಕ್ಕೆ ನಿಂತಿದೆ.
ಬೋರ್ಡೋದ್ರಾವಣ...
ಬೋರ್ಡೋ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ ನಾಶಕ. ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರ ಸಸ್ಯ ರೋಗಗಳ ಸಮರ್ಪಕ ನಿರ್ವಹಣೆ ಸಾಧ್ಯ.
ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ಮೈಲುತುತ್ತು ಒಂದು ಕೆ.ಜಿ, ಸುಣ್ಣ ಒಂದು ಕೆ.ಜಿ, ನೀರು ನೂರು ಲೀಟರ್, ೧೦ ಲೀಟರ್ ಸಾಮರ್ಥ್ಯದ ಎರಡು ಪ್ಲಾಸ್ಟಿಕ್ ಬಕೆಟ್, ೧೦೦ ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಡ್ರಮ್.
ಒಂದು ಕೆ.ಜಿ. ಮೈಲುತುತ್ತನ್ನು ಸಂಪೂರ್ಣ ೧೦ಲೀಟರ್ ನೀರಿನಲ್ಲಿ ಕರಗಿಸಬೇಕು. ಒಂದು ಕೆ.ಜಿ ಸುಣ್ಣವನ್ನು ಮತ್ತೊಂದು ೧೦ ಲೀಟರ್ ನೀರಿನಲ್ಲಿ ಕರಗಿಸಬೇಕು. ಎರಡನ್ನು ಒಂದು ಪ್ಲಾಸ್ಟಿಕ್ ಡ್ರಮ್ ಗೆ ಸುರಿಯಬೇಕು. ಈಗ ಬೋರ್ಡೋ ದ್ರಾವಣ ಸಿದ್ಧ. ಇದು ಸರಿ ಇದೆಯೇ ಎಂದು ಪರೀಕ್ಷಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿ ತೆಗೆದಲ್ಲಿ ಅದರ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡಬಂದಲ್ಲಿ ದ್ರಾವಣ ಆಮ್ಲಯುಕ್ತವಾಗಿದ್ದು, ಸಿಂಪಡಣೆಗೆಯೋಗ್ಯವಾಗಿಲ್ಲ ಎಂಬುದಾಗಿ ತಿಳಿಯಬೇಕು. ಇದನ್ನು ಸರಿಪಡಿಸಲು ಇನ್ನೂ ಸ್ವಲ್ಪ ಸುಣ್ಣ ತಿಳಿಯನ್ನು ದ್ರಾವಣಕ್ಕೆ ಸೇರಿಸಬೇಕು. ನಂತರ ಚಾಕೂ ಬ್ಲೇಡ್‌ನ್ನು ದ್ರಾವಣದಲ್ಲಿ ಅದ್ದಿದಾಗ ಅದು ಹೊಳಪಾಗಿದಲ್ಲಿ ದ್ರಾವಣ ಸಿಂಪಡಣೆಗೆ ಸೂಕ್ತ ಎಂದು ತಿಳಿಯುವುದು ಹಾಗೂ ಕೂಡಲೇ ದ್ರಾವಣವನ್ನು ಸಿಂಪಡಸಬೇಕು.
ಅಡಿಕೆ ಕೊಳೆರೋಗ ನಿಯಂತ್ರಿಸಲು ರೈತರು ಮೈಲುತುತ್ತು ಬಳಸಿದ್ದಲ್ಲಿ ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ಜಿಲ್ಲಾ ವಲಯ ಸಸ್ಯ ಸಂರಕ್ಷಣೆ ಯೋಜನೆ ಹಾಗೂ ರಾಜ್ಯ ವಲಯ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಗಳಲ್ಲಿ ಶೇ.೫೦ರಷ್ಟು ಸಹಾಯಧನ ದೊರೆಯಲಿದೆ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅತೀ ಹೆಚ್ಚು. ಹಾಗಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಭೀತಿಯೂ ಹೆಚ್ಚು. ಆದರೆ ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಂಡಲ್ಲಿ ರೋಗಗಳನ್ನು ತಡೆಗಟ್ಟಿ ಉತ್ತಮ ಗುಣಮಟ್ಟದ ಅತಿಹೆಚ್ಚು ಇಳುವರಿ ಪಡೆಯಲು ಖಂಡಿತಾ ಸಾಧ್ಯವಿದೆ.

ಮಂಗಳವಾರ, ಫೆಬ್ರವರಿ 10, 2015

ಆನ್‌ಲೈನ್‌ನಲ್ಲಿ ಶುರು, ಆಫ್‌ಲೈನ್‌ನಲ್ಲಿ ಮುಕ್ತಾಯ!

internet photo
ದಿನಕ್ಕೊಂದು ಆಪಲ್.... ಎನ್ನುವ ಜಮಾನ ಹೆಚ್ಚೂಕಮ್ಮಿ ಕಳೆದೇ ಹೋಯ್ತು.
ಈಗೇನಿದ್ದರೂ ದಿನಕ್ಕೊಂದು ಆಪ್ (Apps) ಎಂಬ ಹೊಸ ಮಂತ್ರ!
ಹೌದು,
ಅಂಗೈಯಲ್ಲೇ ಅರಮನೆ ತೋರಿಸುವ ಸ್ಮಾರ್ಟ್‌ಫೋನ್‌ನಲ್ಲೀಗ ಈ ಆಪ್‌ (Apps) ಗಳದ್ದೇ ದರ್ಬಾರು.
ಅತ್ತಿತ್ತ ಸ್ವಲ್ಪ ಗಮನಿಸಿ ನೋಡಿ, ‘ಸ್ಮಾರ್ಟ್’ ಆಗಿ ಓಡಾಡಿಕೊಂಡಿರುವ ಇಂದಿನ ಯುವ ಪೀಳಿಗೆಯ ಲೈಫ್‌ಸ್ಟೈಲೇ ಬದಲಾಗಿದೆ. ಮಾತಿನ ಶೈಲಿಯೂ ಬದಲಾಗಿದೆ. ಗುರುತು ಪರಿಚಯ ಇಲ್ಲದವರನ್ನೂ ಅವರು ವಾಟ್ಸಪ್? ಎಂದು ಹುಬ್ಬೇರಿಸುತ್ತಾ, ಫೇಸ್‌ನಲ್ಲಿಯೇ ಬದುಕಿನ ಬುಕ್‌ನ್ನು ಕ್ಷಣಾರ್ಧದಲ್ಲಿ ಓದಿಬಿಡುತ್ತಾರೆ. ನಿಧಾನವಾಗಿ ಈ ಲೋಕದಲ್ಲಿ ಸಂಬಂಧಗಳ ವ್ಯಾಖ್ಯಾನ ಬದಲಾಗುತ್ತಿದೆ. ಕಣ್ಣಲ್ಲಿ ಇದುವರೆಗೆ ಕಂಡೇ ಇರದ ಅಪರಿಚಿತರನ್ನೂ ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಳ್ಳುತ್ತಾರೆ. ಇನ್ಯಾರಿಂದಲೋ ಮೋಸಹೋಗುತ್ತಾರೆ. ಮತ್ಯಾರಿಗೋ ನಿತ್ಯವೂ ಕೀಟಲೆ ನೀಡುತ್ತಾರೆ. ಹೊಸತೇನನ್ನೋ ಕಂಡು ಅಚ್ಚರಿಗೊಳ್ಳುತ್ತಾ, ನನ್ನ ಗೆಳೆಯರ ಬಳಗ ದೊಡ್ಡದಿದೆ ಎಂದು ಬೀಗುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದಕ್ಕಾಗಿ ತುಡಿಯುತ್ತಾ, ಕಾರಣವೇ ಇಲ್ಲದೆ ಖುಷಿಯಾಗುತ್ತ್ತಾ, ಡಿಪ್ರೆಸ್ ಆಗುತ್ತಾ, ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿಯೇ ದಿನಕಳೆಯುವ ಈ ಪಡ್ಡೆಗಳಿಗೆ ಇದುವೇ ಈಗಿನ ಹೊಸ ಅಡ್ಡೆ!
 ವಿ ಚಾಟ್, ಜಿ ಚಾಟ್, ಗೂಗಲ್ ಹ್ಯಾಂಗೌಟ್, ಸ್ಕೌಟ್, ಹೈಕ್, ಟೆಲಿಗ್ರಾಂ... ಇಲ್ಲಿ ಒಂದೇ ಎರಡೇ? ಹರಟುತ್ತಾ ಹರಟುತ್ತಾ ಅಪರಿಚಿತರನ್ನು ಪರಿಚಿತರಾಗಿಸುತ್ತಾ, ಪರಿಚಿತರನ್ನು ದೂರಮಾಡುತ್ತಾ ಸಾಗುವ ಈ ಆಪ್‌ಗಳ ಮೋಡಿಗೆ ಅವರೇ ಯಾಕೆ? ಎಂಥವರೂ ಮರುಳಾಗಲೇಬೇಕು.
ಹರಟೆ ಪ್ರಪಂಚ
ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಅರಂಭದಲ್ಲಿ ತಮಾಷೆಗೆಂದು ತೆರೆದುಕೊಳ್ಳುವ ಈ ‘ಹರಟೆ ಪ್ರಪಂಚ’, ಎಚ್ಚರ ತಪ್ಪಿದರೆ ದಿನ  ವ್ಯಸನದತ್ತ ತಳ್ಳೀತು ಎಂದು ಎಚ್ಚರಿಸುತ್ತಾರೆ ಮನೋರೋಗ ತಜ್ಙರು. ಯಾವ ಕುಟುಂಬದಲ್ಲಿ ಮುಕ್ತತೆಗೆ ಅವಕಾಶವಿಲ್ಲವೋ ಅಲ್ಲಿ ಬೆಳೆದ ಮಕ್ಕಳು ಇಂಥಹಾ ಗೀಳಿಗೆ ಹೆಚ್ಚಾಗಿ ಬೀಳುತ್ತಾರೆ, ಅರಿವೇ ಇಲ್ಲದೆ ಈ ’ಸಾಂಕ್ರಾಮಿಕ ರೋಗ’ದ ಸುಳಿಗೆ ಸಿಕ್ಕುಬಿಡುತ್ತಾರೆ ಎಂಬ ವಾದ ಅವರದ್ದು. ಇದು ಸುಳ್ಳಲ್ಲ ಎಂಬುದಕ್ಕೆ ಇದೀಗ ಅಲ್ಲಲ್ಲಿ ತಲೆ ಎತ್ತುತ್ತಿರುವ ಸೋಶಿಯಲ್ ಡಿ-ಅಡಿಕ್ಷನ್ ಸೆಂಟರ್‌ಗಳು ಸಾಕ್ಷಿ ಹೇಳುತ್ತವೆ. ’ನೆಟ್’ನೊಳಕ್ಕೆ ಸಿಕ್ಕಿಹಾಕಿಕೊಂಡಿರುವವರನ್ನು ರಕ್ಷಿಸುವುದಕ್ಕಾಗಿಯೇ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ’ಸರ್ವೀಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ ಸೆಂಟರ್’ ಸ್ಥಾಪನೆಯಾಗಿದೆ. ಅಸಮರ್ಪಕ ನಿದ್ದೆ, ಅಹಾರ ವೈರಾಗ್ಯ, ಕೀಲು ನೋವು, ಬೊಜ್ಜು, ರಕ್ತದೊತ್ತಡ... ಇವೆಲ್ಲ ಇಂಟರ್ನೆಟ್ ಆತಿ ಬಳಕೆದಾರರಿಗೆ ಸಿಗುವ ಉಚಿತ ಡೌನ್‌ಲೋಡ್‌ಗಳು!
‘ಅಡ್ಡೆ’ ಪರಿಣಾಮ!
ಇಂದು ಜಗತ್ತಿನಾದ್ಯಂತ ಸುಮಾರು ೧೭೬ ಮಿಲಿಯನ್ ಜನತೆ ಸೋಶಿಯಲ್ ನೆಟ್‌ವರ್ಕ್ ಚಟಕ್ಕೆ ಒಳಗಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ. ದುರಂತವೆಂದರೆ, ಈ ಪೈಕಿ ಹತ್ತರಲ್ಲಿ ಎಂಟು ಮಂದಿಗೆ ಇದರಿಂದಾಗುವ ಆಪಾಯದ ಆರಿವೇ ಇಲ್ಲವಂತೆ. ನಮ್ಮಲ್ಲಿ ದಿನಕ್ಕೆ ಐದು ತಾಸು ಇವುಗಳಿಗೇ ಮೀಸಲಿಡುವ ಜನರೂ ಇದ್ದಾರಂತೆ. ಯಾರೂ ಆಗಬಹುದು ಈಗಲೇ ಮಾತನಾಡಬೇಕು, ಇನ್ಯಾರದ್ದೋ ಸ್ಟೇಟಸ್ ಅಪ್‌ಡೇಟ್ ಈ ಕ್ಷಣವೇ ನೋಡಬೇಕು ಎಂಬ ಆತುರ ಈ ಆಡಿಕ್ಷನ್‌ನ ಲಕ್ಷಣ. ಹಾಗಾಗಿ ಸ್ಮಾರ್ಟ್ ಫೋನ್ ಅವಲಂಬಿತರು ಪ್ರತೀ ೧೩ ನಿಮಿಷಕ್ಕೊಮ್ಮೆ ತಮ್ಮ ಫೋನ್ ಚೆಕ್ ಮಾಡುತ್ತಾರೆ ಎಂದು ಸಮೀಕ್ಷೆ ರಿಪೋರ್ಟ್ ಕೊಡುತ್ತದೆ!
ಇಂದು ಗೊತ್ತುಗುರಿಯಿಲ್ಲದೆ ಫ್ರೆಂಡ್ ರಿಕ್ವೆಸ್ಟ್ ಓಕೆ ಮಾಡುವ ಭರದಲ್ಲಿ ಪಕ್ಕದಲ್ಲಿಯೇ ಇರುವ ನಿಷ್ಕಲ್ಮಶ ಗೆಳೆತನ ಮರೆತುಹೋಗುತ್ತಿದೆ. ಫೋನ್  ಪರದೆಯಲ್ಲಿ ಹರಡಿಕೊಳ್ಳುವ ವೀಡಿಯೋ ಕ್ಲಿಪ್ಪಿಂಗ್ ಎಂಜಾಯ್ ಮಾಡುವ ಕ್ಷಣದಲ್ಲಿ ಮನೆಮಂದಿಯ ನೋವು ನೆನಪಾಗುವುದೇ ಇಲ್ಲ. ಯಾರದ್ದೋ ‘ಸಾಧನೆಗೆ’ ಲೈಕ್ ಒತ್ತುವ ಭರದಲ್ಲಿ ತಾನು ಸಾಧಿಸಬೇಕಾದ ಗುರಿ ಗುರುತಿಸುವುದೇ ಇಲ್ಲ. ಅಷ್ಟರಮಟ್ಟಿಗೆ ಮನಸ್ಸಿಗೆ ಮಂಕುಬೂದಿ ಎರಚುತ್ತಿದೆ ಈ ಆಪ್ ಲೋಕ!
ಪ್ರತೀ ಚಟುವಟಿಕೆ ದಾಖಲಾಗುತ್ತದೆ!
ಸಂಗಾತಿಯ ಅಯ್ಕೆಗೆ, ಬ್ರೇಕ್‌ಅಪ್‌ಗೆ, ಗೂಢಾಚಾರಿಕೆಗೆ.. ಹೀಗೆ ಥರಾವಳಿಯ ಆಪ್‌ಗಳು ಎಚ್ಚರ ತಪ್ಪಿದರೆ ಹೊಸ ಅನಾಹುತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ಸೇಫ್ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾವುದೇ ಕ್ಷಣದಲ್ಲಿ ನಿಮ್ಮ ಖಾಸಗಿ ಮಾಹಿತಿಗಳು ಸೋರಿಕೆಯಾಗಬಹುದು. ನಮ್ಮ ಚಟುವಟಿಕೆಗಳು ಯಾರಿಗೂ ತಿಳಿಯುವುದಿಲ್ಲ ಎಂದು ನೀವು ಅಂದುಕೊಂಡರೂ ಯಾವುದೋ ದೇಶದ ಯಾವುದೋ ಸರ್ವರ್‌ಗಳಲ್ಲಿ ಅದು ಕ್ಷಣ ಕ್ಷಣಕ್ಕೂ ದಾಖಲಾಗುತ್ತಿದೆ ಎಂಬುದು ನಮ್ಮ ಆರಿವಿನಲ್ಲಿರಬೇಕು. ಇನ್ನು ಎಲ್ಲಾ ಆಪ್‌ಗಳು ಅಪಾಯಕಾರಿ ಖಂಡಿತಾ ಅಲ್ಲ. ಬಹಳಷ್ಟು ಮಾಹಿತಿ ನೀಡುವ ಆಪ್‌ಗಳೂ ಇಲ್ಲಿವೆ. ಸುದ್ದಿಗಳು, ವಿಚಾರಗಳು, ವಿಕಿಪೀಡಿಯಾದಂತಹಾ ಮಾಹಿತಿಕೋಶಗಳು, ಮನೋರಂಜನೆಗೂ ಇಲ್ಲಿ ಬಹಳಷ್ಟು ಅವಕಾಶಗಳಿವೆ. ಆದರೆ ವಿವೇಚನಾ ಶಕ್ತಿ ಇಲ್ಲದಿದ್ದರೆ ನಾವೆಷ್ಟೇ ಸ್ಮಾರ್ಟ್ ಅಗಿದ್ದರೂ ಏನು ಪ್ರಯೋಜನ, ಅಲ್ಲವೇ?
ಫಿಯರ್ ಆಫ್ ಮಿಸ್ಸಿಂಗ್ ಔಟ್!
ಏಕಾಗ್ರತೆ ಕೊರತೆ, ಕುಂಠಿತವಗುವ ನೆನಪಿನ ಶಕ್ತಿ, ಖಿನ್ನತೆ, ಮಾನಸಿಕ ಒತ್ತಡ, ಕಣ್ಣು ನೋವು, ಯಾವುದೇ ನಿರ್ಧಾರ ತೆಗೆದುಕೊಳ್ಳಲಗದ ಸ್ಥಿತಿ... ಇವೆಲ್ಲವೂ ಸೋಶಿಯಲ್ ನೆಟ್‌ವರ್ಕ್ ಕೊಡುಗೆ. ಸೋಶಿಯಲ್ ನೆಟ್‌ವರ್ಕ್ ಅಪ್‌ಗಳಲ್ಲಿ ದಿನದ ಹೆಚ್ಚಿನ ಸಮಯ ಕಳೆಯದಿದ್ದರೆ ಸ್ನೇಹಿತರು ಕಳೆದುಹೋಗುತ್ತಾರೆ, ಮತ್ತೆಂದೂ ಅವರು ಸಿಗುವುದಿಲ್ಲ ಎಂಬ ಫಿಯರ್ ಆಫ್ ಮಿಸ್ಸಿಂಗ್ ಔಟ್ ಸಮಸ್ಯೆ ನಿಧಾನವಾಗಿ ಅವರಿಸಿಕೊಳ್ಳುತ್ತದೆ. ಒಂದಷ್ಟು ಹೊತ್ತು ಅದರಿಂದ ಹೊರಗಿದ್ದರೆ ಏನನ್ನೋ ಕಳೆದುಕೊಂಡ ಭಾವನೆ, ಅತ್ತ ಕಡೆಯಿಂದ ರಿಪ್ಲೈ ಬಾರದಿದ್ದರೆ ಶುರುವಾಗುವ ಹತಾಶೆ, ಖಿನ್ನತೆ. ಇದರಿಂದಾಗಿ ಬೇಳಗ್ಗೆ ಹಾಸಿಗೆಯಿಂದ ಎದ್ದಾಕ್ಷಣದಿಂದ ಶುರುವಾಗಿ ರಾತ್ರಿ ನಿದ್ದೆಗೆ ಜಾರುವರೆಗೆ ಈ ಗೀಳು ಮುಂದುವರಿಯುತ್ತದೆ ಎನ್ನುತ್ತಾರೆ ಮನೋರೋಗ ತಜ್ಙರು.
ಎಲ್ಲಾ ಮಾಯ, ಇಲ್ಲಿ...
ಅತಿಯಾದ ಸೋಶಿಯಲ್ ನೆಟ್‌ವರ್ಕ್ ವ್ಯಸನದಿಂದ ನಿಧಾನವಾಗಿ ಸ್ವಂತಿಕೆ ಮಾಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಓದಿನ ಕುರಿತಾದ ಆಸಕ್ತಿ ಮಾಯವಾಗುತ್ತದೆ. ಕಚೇರಿಗಳಲ್ಲಿ ಉದ್ಯೋಗಿ ಈ ವ್ಯಸನಕ್ಕೆ ತುತ್ತಾಗಿದ್ದರೆ, ಉತ್ಪಾದನೆ ಗುಣಮಟ್ಟ ಮಾಯವಾಗುತ್ತದೆ. ಹೀಗಾಗಿಯೇ ಕೆಲವು ಕಚೇರಿಗಳ ಕಂಪ್ಯೂಟರ್‌ಗಳಲ್ಲಿ ಇಂದು ಸೋಷಿಯಲ್ ನೆಟ್‌ವರ್ಕ್‌ಗಳನ್ನೇ ’ಮಾಯ’ ಮಾಡಲಾಗಿದೆ. ಮನೆಗಳಲ್ಲಿಯೂ ಇಂತಹಾ ಮಾಧ್ಯಮಕ್ಕೆ ಹಲವರು ಕಡಿವಾಣ ಹಾಕಿದ್ದಾರೆ. ಕಂಪ್ಯೂಟರ್ ಮೌನವಾದರೇನಂತೆ, ಅಷ್ಟರಲ್ಲಾಗಲೇ ಸ್ಮಾರ್ಟ್ ಫೋನ್ ಸಣ್ಣದೊಂದು ಬೀಪ್ ಹೊರಡಿಸುತ್ತದೆ, ಸ್ಕ್ರೀನ್ ಅನ್ ಲಾಕ್‌ನತ್ತ ಬೆರಳು ಹೊರಳುತ್ತದೆ!
ಮುಖ ನೋಡಿ ಮಾತಾಡಿ!
ಮುಖ ನೋಡದೇ ಹರಟುವ ಅಪ್‌ಗಳದ್ದೇ ಒಂದು ತೂಕವದರೆ, ಇನ್ನು ಮುಖ ನೋಡುತ್ತಾ ಹರಟೆಹೊಡೆಯಲು ಕ್ವಿಕ್, ಫ್ರಿಂಗ್, ಓವೋ, ಟ್ಯಾಂಗೋ ಮೊದಲಾದವುಗಳದ್ದೇ ಒಂದು ತೂಕ. ಹಿಂದೆಲ್ಲಾ ಸಂಬಂಧಗಳಿಗೆ ಹೆಚ್ಚಿನ ಅರ್ಥವಿರುತ್ತಿತ್ತು. ನೋಟದಲ್ಲಿ ಅರಂಭವಗುವ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿ ಹೊಸ ಬಾಂಧ್ಯವ್ಯ ಹುಟ್ಟು ಹಾಕುತ್ತಿತ್ತು.
 ಆದರೀಗ ಅಷ್ಟೆಲ್ಲಾ ಟೈಮ್ ಇಲ್ಲ. ಒಂದು ಮೆಸೇಜ್‌ನಲ್ಲಿ ಎಲ್ಲವೂ ಇತ್ಯರ್ಥವಾಗುತ್ತದೆ. ಆನ್‌ಲೈನ್‌ನಲ್ಲಿ ಶುರು, ಆಫ್‌ಲೈನ್‌ನಲ್ಲಿ ಮುಕ್ತಾಯ!
ಅದೇನೋ ಅಂತರಲ್ಲ, ಕಾಲಕ್ಕೆ ತಕ್ಕಂತೆ....

ದೇವರೇ ಒಲಿದಿದ್ದಾನೆ ಅಂತ ಆಕೆಗೇನು ಗೊತ್ತು?

ಕುಂತ್ರೂ ನಿಂತ್ರೂ ನಿಂದೇ ಧ್ಯಾನ,ಜೀವಕ್ಕಿಲ್ಲ ಸಮಾಧಾನ...
ಹಾಗಂತ ಗೊಣಗಿಕೊಂಡೇ ಮನೆ ಒಳಕ್ಕೆ ಕಾಲಿಟ್ಟರೆ, ಪೋಸ್ಟ್ ಮ್ಯಾನು ಇಟ್ಟು ಹೋಗಿದ್ದ ನಸುಗೆಂಪು ಬಣ್ಣದ ನಿನ್ನ ಪತ್ರ ಅಲ್ಲಿಂದಲೇ ಹಾಯ್ ಎಂದಿತ್ತು!
ನಿನ್ನ ಪತ್ರಗಳೇ ಹಾಗೆ! ಮನಸ್ಸಲ್ಲಿ ದುಗುಡ ತುಂಬಿಕೊಂಡಾಗ ಅದೆಲ್ಲಿಂದಲೋ ಥಟ್ ಅಂತ ಪ್ರತ್ಯಕ್ಷವಾಗಿಬಿಡುತ್ತವೆ. ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಂತೆ. ಇಂದೂ ಕೂಡಾ ಹಾಗೆಯೇ ಬೆಳಬೆಳಗ್ಗೆ ಅದೇಕೋ ಸಿಟ್ಟು...
ಸಿಡಿಮಿಡಿಗೊಳ್ಳುತ್ತಲೇ, ಅಡುಗೆ ಮನೆ ತಲುಪಿದವಳಿಗೆ ಯಾಕೋ ಅಮ್ಮ ಕಾಣಲೇ ಇಲ್ಲ, ಯಾವಾಗಲೂ ಏಳು ಮಗಳೇ... ಅಂತ ರಾಗವೆಳೆಯುತ್ತಾ ಕೈಗೆ ಟೀ ಕಪ್ ಇಟ್ಟು ಎದ್ದು ಕೂರಿಸುತ್ತಿದ್ದ ಅಮ್ಮ ಇಂದು ಮಾತ್ರ ಗಂಟೆ ಎಂಟಾದರೂ ಗಾಯಬ್! ಸಿಟ್ಟು ಮತ್ತೆ ನೆತ್ತಿಗೇರಿತ್ತು. ಇದ್ದ ಬಿದ್ದ ಡಬ್ಬಿಗಳನ್ನೆಲ್ಲಾ ಓಪನ್ ಮಾಡ್ತಾ ನಂದೇ ಸ್ಟೈಲ್ ನಲ್ಲಿ ಟೀ ರೆಡಿ ಮಾಡಿದೆ. ಬಾಯಿಗಿಟ್ಟಾಗಲೇ ಗೊತ್ತಾಗಿದ್ದು, ಸಕ್ಕರೆ ಬದಲು ಹಾಕಿದ್ದು ಉಪ್ಪು ಅಂತ!
ಅಮ್ಮಾ  ಹೇಳ್ತಾನೇ ಇಱ್ತಾಳೆ ಗೊತ್ತಾ? ಅಡುಗೆ ಕಲೀ ಮಗಳೇ ಅಡುಗೆ ಕಲಿ, ಇಲ್ಲಾಂದ್ರೆ ಮದುವೆ ಆದ ಮೇಲೆ ಸಮಸ್ಯೆಯಾಗುತ್ತೇಂತ. ಅಷ್ಟರಲ್ಲಾಗಲೇ ಬರ್ಮುಡಾ ಮೇಲೊಂದು ಬನಿಯಾನು, ಹೆಗಲಿಗೊಂದು ಬೈರಾಸು ಹಾಕ್ಕೊಂಡು ಉಸ್ಸಾಪ್ಪಾ ಅಂತ ನೀನು ಸಾಂಬಾರ್ ಗೆ ಒಗ್ಗರಣೆಗೆ ಕೊಡೋ ದೃಶ್ಯ ಕಣ್ಣಮುಂದೆ ಸರಿದು ಹೋಗುತ್ತೆ. ಇಲ್ಲ ಅಂತದ್ದೇನು ಸಮಸ್ಯೆ ಬರಲ್ಲ ಬಿಡಮ್ಮ ಅಂತ ಕಣ್ಣು ಮಿಟುಕಿಸಿ ಹೇಳಿಬಿಡುತ್ತೇನೆ.
ಅಮ್ಮನದ್ದೊಂದು ವಿಷಾದದ ನೋಟ!
ಆದರೆ ಇಂದು ಹೇಳೋಕೆ ಅಮ್ಮಾ ಇರಲಿಲ್ಲ. ಪಕ್ಕದ ದೇವಸ್ಥಾನದಲ್ಲಿ ಪೂಜೆ ಅಂತ ಗೊತ್ತಾದರೆ ಸಾಕು ಹೊತ್ತು ನೋಡದೆ ಹೊರಟು ಬಿಡುತ್ತಾಳೆ. ಇಂದು ಕೂಡಾ ಪಕ್ಕದ ಮನೆ ಶಾಂತಮ್ಮ ಬನ್ರೀ ಹೋಗೋಣ ಅಂತ ಹೇಳಿದ್ರಂತೆ, ಮಗಳನ್ನು ಎಬ್ಬಿಸೋಕೂ ಮರ್‍ತು ಹೋಗಿಬಿಟ್ಟಿದ್ದಾಳೆ. ಪ್ರತಿ ಸಾರಿನೂ ಅಮ್ಮ ವಾಪಸ್ಸಾದಾಗ ನಾನು ಕೇಳ್ತೀನಿ ಏನು ಕೇಳಿಕ್ಕೊಂಡೆ ದೇವ್ರಲ್ಲಿ ಅಂತ. ನನ್ನ ಮುದ್ದು ಕೂಸಿಗೆ ಚಿನ್ನದಂತಾ ಗಂಡನನ್ನ ಕೊಡಪ್ಪಾ ಅಂತ ಕೇಳಿದೆ ಅಂತಾಳೆ ನನ್ನಮ್ಮ! ಆದರೆ ನಾನು ದೇವರನ್ನೇ ಪ್ರೀತಿಸ್ತಿದ್ದೀನಿ ಮತ್ತು ಆ ದೇವರು ನನಗೆ ಒಲಿದುಬಿಟ್ಟಿದ್ದಾನೆ ಅನ್ನೋದು ಪಾಪ ಆಕೆಗೇನು ಗೊತ್ತು?
’ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನಾ
ನೀಡುವಾ ಮುನ್ನ ನಾನೆ
ಆಮಂತ್ರಣ....
’ಹೌದು ಕಣೋ ಯಾಕೋ ಪತ್ರ ಬಿಚ್ಚುತ್ತಿದ್ದಂತೆಯೇ ಈ ಹಾಡು ನೆನಪಾಯ್ತು. ಈ ಮುದ್ದು ಹುಡುಗಿಯ ಮುಗ್ದ ಹೃದಯದಲ್ಲಿ ನಿನ್ನಂತ ಗುಣವಂತ ಬಂದಾನೆಂಬ ನಿರೀಕ್ಷೆಯಾದರೂ ಇತ್ತಾ? ಪ್ರಾಯಕ್ಕೆ ಬಂದ ಪ್ರತಿ ಹುಡುಗಿ ತನ್ನ ಜೀವನದ ಬಗ್ಗೆ ನೂರೆಂಟು ಕನಸು ಕಾಣ್ತಾಳಂತೆ. ಆದರೆ ನನ್ನಲ್ಲಿ ಕನಸು ಕಾಣಲೂ ಬಿಡದೆ ಅದಕ್ಕೂ ಮುನ್ನವೇ ನೀನು ಬಂದೇ ಬಿಟ್ಟೆಯಲ್ಲೋ !
ಇಳಿ ಸಂಜೆವರೆಗೂ ಬಂಡೇ ಮೇಲೆ ಕೂತು ಎರಡೂ ಕಾಲನ್ನು ನೀರಿಗದ್ದಿ ನಿನ್ನ ಪತ್ರ ಓದುತ್ತಲೇ ಇದ್ದೆ. ನನ್ನ ಮೇಲೆ ಅದೆಂತಾ ಪರಿಣಾಮ ಬೀರುತ್ತೆ ಗೊತ್ತಾ ನಿನ್ನ ಪತ್ರ? ಮುಂಜಾನೆ ಎದ್ದಾಗಿನಿಂದಿದ್ದ ಸಿಡಿಮಿಡಿ ಪತ್ರ ಓದುತ್ತಿದ್ದಂತೆಯೇ ಮಂಗಮಾಯವಾಗಿಬಿಟ್ಟಿತ್ತು. ನನ್ನ ಹುಡುಗನಿಗೆ ಇಂದೇ ಉತ್ತರ ಬರೀಬೇಕು ಅಂತ ಓಡೋಡುತ್ತಲೇ ಮನೆಗೆ ವಾಪಾಸ್ಸು ಬಂದೆ.
ನಮ್ಮ ಹುಡುಗೀನ ನೋಡಿದ್ಯಾ? ಆ ಒಂದು ಲೆಟಱ್ರು ಕೈಗೆ ಸಿಕ್ಕರೆ ಸಾಕು ಮುಖ ಹುಣ್ಣಿಮೆ ಚಂದ್ರನಂತೆ ಅರಳಿ ಬಿಡುತ್ತದೆ. ಮೋಸ್ಟ್ಲಿ ಯಾರೋ ಹುಡುಗಂದಿರಬೇಕು. ಒಬ್ಳೇ ಇದ್ದಾಗ ಸ್ವಲ್ಪ ವಿಚಾರ್‍ಸು. ಇಬ್ರಿಗೂ ಒಪ್ಪಿಗೆ ಇದೆ ಅಂತಾದ್ರೆ ಮದುವೆ ಮಾಡೇ ಬಿಡೋಣ.... ಅಂತ ಅಪ್ಪ ಅಮ್ಮನಲ್ಲಿ ಹೇಳ್ತಿದ್ದುದು ಕಿವಿಗೆ ಬಿತ್ತು!
ಮನಸ್ಸು ಗರಿಬಿಚ್ಚಿದ ನವಿಲು! ನಾನಂತೂ ಓಕೆ ಅಂತೀನಿ. ನೀನು ಮಾತ್ರ ಇನ್ನೂ ಸ್ವಲ್ಪ ಸಾಂಬಾರು, ಪಲ್ಯ, ಪಾಯಸ... ಅಂತ ಎಲ್ಲಾ ಕಲಿತ್ಕೊಂಡು ಓಕೆ ಅನ್ನು.
ಏನಂತೀಯ?