ಮಂಗಳವಾರ, ಫೆಬ್ರವರಿ 10, 2015

ದೇವರೇ ಒಲಿದಿದ್ದಾನೆ ಅಂತ ಆಕೆಗೇನು ಗೊತ್ತು?

ಕುಂತ್ರೂ ನಿಂತ್ರೂ ನಿಂದೇ ಧ್ಯಾನ,ಜೀವಕ್ಕಿಲ್ಲ ಸಮಾಧಾನ...
ಹಾಗಂತ ಗೊಣಗಿಕೊಂಡೇ ಮನೆ ಒಳಕ್ಕೆ ಕಾಲಿಟ್ಟರೆ, ಪೋಸ್ಟ್ ಮ್ಯಾನು ಇಟ್ಟು ಹೋಗಿದ್ದ ನಸುಗೆಂಪು ಬಣ್ಣದ ನಿನ್ನ ಪತ್ರ ಅಲ್ಲಿಂದಲೇ ಹಾಯ್ ಎಂದಿತ್ತು!
ನಿನ್ನ ಪತ್ರಗಳೇ ಹಾಗೆ! ಮನಸ್ಸಲ್ಲಿ ದುಗುಡ ತುಂಬಿಕೊಂಡಾಗ ಅದೆಲ್ಲಿಂದಲೋ ಥಟ್ ಅಂತ ಪ್ರತ್ಯಕ್ಷವಾಗಿಬಿಡುತ್ತವೆ. ಮುಳುಗುವವನಿಗೆ ಹುಲ್ಲು ಕಡ್ಡಿ ಸಿಕ್ಕಂತೆ. ಇಂದೂ ಕೂಡಾ ಹಾಗೆಯೇ ಬೆಳಬೆಳಗ್ಗೆ ಅದೇಕೋ ಸಿಟ್ಟು...
ಸಿಡಿಮಿಡಿಗೊಳ್ಳುತ್ತಲೇ, ಅಡುಗೆ ಮನೆ ತಲುಪಿದವಳಿಗೆ ಯಾಕೋ ಅಮ್ಮ ಕಾಣಲೇ ಇಲ್ಲ, ಯಾವಾಗಲೂ ಏಳು ಮಗಳೇ... ಅಂತ ರಾಗವೆಳೆಯುತ್ತಾ ಕೈಗೆ ಟೀ ಕಪ್ ಇಟ್ಟು ಎದ್ದು ಕೂರಿಸುತ್ತಿದ್ದ ಅಮ್ಮ ಇಂದು ಮಾತ್ರ ಗಂಟೆ ಎಂಟಾದರೂ ಗಾಯಬ್! ಸಿಟ್ಟು ಮತ್ತೆ ನೆತ್ತಿಗೇರಿತ್ತು. ಇದ್ದ ಬಿದ್ದ ಡಬ್ಬಿಗಳನ್ನೆಲ್ಲಾ ಓಪನ್ ಮಾಡ್ತಾ ನಂದೇ ಸ್ಟೈಲ್ ನಲ್ಲಿ ಟೀ ರೆಡಿ ಮಾಡಿದೆ. ಬಾಯಿಗಿಟ್ಟಾಗಲೇ ಗೊತ್ತಾಗಿದ್ದು, ಸಕ್ಕರೆ ಬದಲು ಹಾಕಿದ್ದು ಉಪ್ಪು ಅಂತ!
ಅಮ್ಮಾ  ಹೇಳ್ತಾನೇ ಇಱ್ತಾಳೆ ಗೊತ್ತಾ? ಅಡುಗೆ ಕಲೀ ಮಗಳೇ ಅಡುಗೆ ಕಲಿ, ಇಲ್ಲಾಂದ್ರೆ ಮದುವೆ ಆದ ಮೇಲೆ ಸಮಸ್ಯೆಯಾಗುತ್ತೇಂತ. ಅಷ್ಟರಲ್ಲಾಗಲೇ ಬರ್ಮುಡಾ ಮೇಲೊಂದು ಬನಿಯಾನು, ಹೆಗಲಿಗೊಂದು ಬೈರಾಸು ಹಾಕ್ಕೊಂಡು ಉಸ್ಸಾಪ್ಪಾ ಅಂತ ನೀನು ಸಾಂಬಾರ್ ಗೆ ಒಗ್ಗರಣೆಗೆ ಕೊಡೋ ದೃಶ್ಯ ಕಣ್ಣಮುಂದೆ ಸರಿದು ಹೋಗುತ್ತೆ. ಇಲ್ಲ ಅಂತದ್ದೇನು ಸಮಸ್ಯೆ ಬರಲ್ಲ ಬಿಡಮ್ಮ ಅಂತ ಕಣ್ಣು ಮಿಟುಕಿಸಿ ಹೇಳಿಬಿಡುತ್ತೇನೆ.
ಅಮ್ಮನದ್ದೊಂದು ವಿಷಾದದ ನೋಟ!
ಆದರೆ ಇಂದು ಹೇಳೋಕೆ ಅಮ್ಮಾ ಇರಲಿಲ್ಲ. ಪಕ್ಕದ ದೇವಸ್ಥಾನದಲ್ಲಿ ಪೂಜೆ ಅಂತ ಗೊತ್ತಾದರೆ ಸಾಕು ಹೊತ್ತು ನೋಡದೆ ಹೊರಟು ಬಿಡುತ್ತಾಳೆ. ಇಂದು ಕೂಡಾ ಪಕ್ಕದ ಮನೆ ಶಾಂತಮ್ಮ ಬನ್ರೀ ಹೋಗೋಣ ಅಂತ ಹೇಳಿದ್ರಂತೆ, ಮಗಳನ್ನು ಎಬ್ಬಿಸೋಕೂ ಮರ್‍ತು ಹೋಗಿಬಿಟ್ಟಿದ್ದಾಳೆ. ಪ್ರತಿ ಸಾರಿನೂ ಅಮ್ಮ ವಾಪಸ್ಸಾದಾಗ ನಾನು ಕೇಳ್ತೀನಿ ಏನು ಕೇಳಿಕ್ಕೊಂಡೆ ದೇವ್ರಲ್ಲಿ ಅಂತ. ನನ್ನ ಮುದ್ದು ಕೂಸಿಗೆ ಚಿನ್ನದಂತಾ ಗಂಡನನ್ನ ಕೊಡಪ್ಪಾ ಅಂತ ಕೇಳಿದೆ ಅಂತಾಳೆ ನನ್ನಮ್ಮ! ಆದರೆ ನಾನು ದೇವರನ್ನೇ ಪ್ರೀತಿಸ್ತಿದ್ದೀನಿ ಮತ್ತು ಆ ದೇವರು ನನಗೆ ಒಲಿದುಬಿಟ್ಟಿದ್ದಾನೆ ಅನ್ನೋದು ಪಾಪ ಆಕೆಗೇನು ಗೊತ್ತು?
’ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನಾ
ನೀಡುವಾ ಮುನ್ನ ನಾನೆ
ಆಮಂತ್ರಣ....
’ಹೌದು ಕಣೋ ಯಾಕೋ ಪತ್ರ ಬಿಚ್ಚುತ್ತಿದ್ದಂತೆಯೇ ಈ ಹಾಡು ನೆನಪಾಯ್ತು. ಈ ಮುದ್ದು ಹುಡುಗಿಯ ಮುಗ್ದ ಹೃದಯದಲ್ಲಿ ನಿನ್ನಂತ ಗುಣವಂತ ಬಂದಾನೆಂಬ ನಿರೀಕ್ಷೆಯಾದರೂ ಇತ್ತಾ? ಪ್ರಾಯಕ್ಕೆ ಬಂದ ಪ್ರತಿ ಹುಡುಗಿ ತನ್ನ ಜೀವನದ ಬಗ್ಗೆ ನೂರೆಂಟು ಕನಸು ಕಾಣ್ತಾಳಂತೆ. ಆದರೆ ನನ್ನಲ್ಲಿ ಕನಸು ಕಾಣಲೂ ಬಿಡದೆ ಅದಕ್ಕೂ ಮುನ್ನವೇ ನೀನು ಬಂದೇ ಬಿಟ್ಟೆಯಲ್ಲೋ !
ಇಳಿ ಸಂಜೆವರೆಗೂ ಬಂಡೇ ಮೇಲೆ ಕೂತು ಎರಡೂ ಕಾಲನ್ನು ನೀರಿಗದ್ದಿ ನಿನ್ನ ಪತ್ರ ಓದುತ್ತಲೇ ಇದ್ದೆ. ನನ್ನ ಮೇಲೆ ಅದೆಂತಾ ಪರಿಣಾಮ ಬೀರುತ್ತೆ ಗೊತ್ತಾ ನಿನ್ನ ಪತ್ರ? ಮುಂಜಾನೆ ಎದ್ದಾಗಿನಿಂದಿದ್ದ ಸಿಡಿಮಿಡಿ ಪತ್ರ ಓದುತ್ತಿದ್ದಂತೆಯೇ ಮಂಗಮಾಯವಾಗಿಬಿಟ್ಟಿತ್ತು. ನನ್ನ ಹುಡುಗನಿಗೆ ಇಂದೇ ಉತ್ತರ ಬರೀಬೇಕು ಅಂತ ಓಡೋಡುತ್ತಲೇ ಮನೆಗೆ ವಾಪಾಸ್ಸು ಬಂದೆ.
ನಮ್ಮ ಹುಡುಗೀನ ನೋಡಿದ್ಯಾ? ಆ ಒಂದು ಲೆಟಱ್ರು ಕೈಗೆ ಸಿಕ್ಕರೆ ಸಾಕು ಮುಖ ಹುಣ್ಣಿಮೆ ಚಂದ್ರನಂತೆ ಅರಳಿ ಬಿಡುತ್ತದೆ. ಮೋಸ್ಟ್ಲಿ ಯಾರೋ ಹುಡುಗಂದಿರಬೇಕು. ಒಬ್ಳೇ ಇದ್ದಾಗ ಸ್ವಲ್ಪ ವಿಚಾರ್‍ಸು. ಇಬ್ರಿಗೂ ಒಪ್ಪಿಗೆ ಇದೆ ಅಂತಾದ್ರೆ ಮದುವೆ ಮಾಡೇ ಬಿಡೋಣ.... ಅಂತ ಅಪ್ಪ ಅಮ್ಮನಲ್ಲಿ ಹೇಳ್ತಿದ್ದುದು ಕಿವಿಗೆ ಬಿತ್ತು!
ಮನಸ್ಸು ಗರಿಬಿಚ್ಚಿದ ನವಿಲು! ನಾನಂತೂ ಓಕೆ ಅಂತೀನಿ. ನೀನು ಮಾತ್ರ ಇನ್ನೂ ಸ್ವಲ್ಪ ಸಾಂಬಾರು, ಪಲ್ಯ, ಪಾಯಸ... ಅಂತ ಎಲ್ಲಾ ಕಲಿತ್ಕೊಂಡು ಓಕೆ ಅನ್ನು.
ಏನಂತೀಯ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ