ಸೋಮವಾರ, ಫೆಬ್ರವರಿ 9, 2015

ಉಸಿರನ್ನು ಎಂದಾದರೂ ಮರೆಯಲು ಸಾಧ್ಯವಾ?

ಅದೆಲ್ಲಿದ್ದೀಯ ಪಾಪು?
ನಟ್ಟ ನಡುರಾತ್ರಿಯಲ್ಲಿ ಬಂದು ಮನಸ್ಸಿಗೆ ಖುಷಿಕೊಟ್ಟು ಹೋದ ಮಿಂಚು ಹುಳದಂತೆ...
ಸುಡು ಬಿಸಿಲಿನ ನಡುವೆ ಹಾದು ಹೋದ ತಂಗಾಳಿಯಂತೆ..
ಸುಂದರ ಹೂವಿನ ಮೇಲೆ ಮುದುಡಿ ಕುಳಿತು ಮಾಯವಾದ ಇಬ್ಬನಿಯ ಹನಿಯಂತೆ..
ಎಲ್ಲಿ ಹೋದೆ?
ಕಂಡಿಲ್ಲ ಯಾರೂ
ಆ ದೇವರನ್ನು
ಇರಬಹುದೋ ಏನೋ
ನಿನ್ನಂತೆ ಅವನು...

ಇಂದು ಯಾಕೋ ನೀನು ಬಿಟ್ಟೂ ಬಿಡದೆ ನೆನಪಾಗುತ್ತಿದ್ದೀಯ. ನೆನಪಾದಾಗಲೆಲ್ಲ ನನ್ನ ಕಣ್ಣು ಹನಿಗೂಡುತ್ತದೆ.
ಹೇಳು ಎಲ್ಲಿದ್ದೀಯ?
ಇಷ್ಟಕ್ಕೂ ನಿನ್ನನ್ನು ನೋಡದೆಯೇ ಅಷ್ಟೊಂದು ಸ್ನೇಹ, ಬಾಂಧವ್ಯ ಬೆಳೆದಿದ್ದು ಹೇಗೆ ಅನ್ನೋದು ನನ್ನಲ್ಲಿ ಇಂದಿಗೂ ಉತ್ತರಿಸಲಾಗದ ಪ್ರಶ್ನೆಯಾಗಿಯೇ ಉಳಿದಿದೆ. ಅಕ್ಷರಗಳು ಅದೆಂತಾ ಮೈತ್ರಿ ತಂದಿತ್ತವಲ್ಲಾ ನಮ್ಮಲ್ಲಿ?
ನಿನ್ನ ಅಕ್ಷರಗಳು ಮಾತಾಡುತ್ತಿದ್ದರೆ ಮನಸು ಅರಳಿಬಿಡುತ್ತಿತ್ತು. ನೀನು ಬರೆಯುತ್ತಿದ್ದ ಅಕ್ಷರಗಳು ಕಣ್ಣರಳಿಸುವಂತೆ ಮಾಡುತ್ತಿದ್ದವು. ಮುಖದಲ್ಲೊಂದು ನಗು ಮೂಡಿಸುತ್ತಿದ್ದವು. ಬದುಕಿಗೆ ದಾರಿ ತೋರುತ್ತಿದ್ದವು...
ಆದರಿಂದು?
ಅಕ್ಷರಗಳು ಮೂಕವಾಗಿ ಬಿಟ್ಟಿದೆ. ಅದು ಮಾತಾಡುತ್ತಿಲ್ಲ. ಮೌನ ಮನಸ್ಸನ್ನು ಕೊಲ್ಲುತ್ತಿದೆ. ಹೇಳು ಪಾಪು, ಅದೆಲ್ಲಿ ಮರೆಯಾದೆ?
ಮಾತುಗಳು ನನ್ನಲ್ಲೂ ಉಳಿದ್ದವು. ಬಹುಷಃ ನಿನ್ನನ್ನು ಉಳಿದುಕೊಂಡಿದ್ದಿರಬೇಕು. ಮಾತು ಮುಂದುವರಿಸೋಣವೆಂದರೆ ಭಗವಂತ ಯಾಕೋ ಅದಕ್ಕೆ ಅವಕಾಶವೇ ನೀಡಲಿಲ್ಲ. ಅವನು ತುಂಬಾ ಕೆಟ್ಟವನಾ?
ಕೆಲವೊಮ್ಮೆ ಹಾಗಂತ ಸಂಶಯ ಕಾಡುತ್ತದೆ.
ತೂ ಬತಾ ಹೋ ಕಹಾಂ
ಇಸ್ ನಶೀಲೀ ರಾತ್ ಮೇ
ಮಾನೇನಾ ಮೇರಾದಿಲ್ ದಿವಾನಾ..

ಕಳೆದು ಹೋದ ದಿನಗಳು ಮತ್ತೆ ಬರಲಾರದಾ ಗೆಳತಿ? ಉಳಿದು ಹೋದ ಮಾತುಗಳನ್ನು ಆಡಲಿಕ್ಕಾದರೂ? ನನಗೆ ಗೊತ್ತು ಅದು ಸಾಧ್ಯವಿಲ್ಲವೆಂದು. ಆದರೂ ಪುರಾಣದ ಕಥೆಗಳಲ್ಲಿ ನಡೆದು ಹೋಗುವ ಪವಾಡಗಳಂತೆ ..?
ಹುಚ್ಚು ಕಲ್ಪನೆ ಕಂಡು ಮನಸ್ಸು ನಗುತ್ತದೆ.
ಗೆಳೆಯಾ ಎಂದರೆ
ಅದಕೂ ಹತ್ತಿರ
ಇನಿಯಾ ಎಂದರೆ
ಅದಕೂ ಎತ್ತರ...

ಈಗ ಅಂದುಕೊಳ್ಳುತ್ತಿದ್ದೇನೆ, ಇಷ್ಟಕ್ಕೂ ಈ ನಮ್ಮ ಸ್ನೇಹ ನಿನಗೆ ಬೇಸರವಾಗಿ ಬಿಟ್ಟಿತೇನೋ ಎಂದು? ಅದೇ ಮಾತು, ಅದೇ ಸಮಾಧಾನಗಳು ನೀರಸ ಎನಿಸಿತೇನೋ.. ಒಂದು ಮಾತೂ ಹೇಳದೆ ನಡೆದು ಬಿಟ್ಟೆಯಲ್ಲಾ, ಇದೇ ಕಾರಣ ನೀಡಿ ಮನಸ್ಸಿಗೆ ಸಮಾಧಾನ ಮಾಡಿಬಿಡುತ್ತೇನೆ.
ಇರಲಿ,
ಬರುವಾಗ ಭಗವಂತನಲ್ಲಿ ಕೇಳಿಕೊಂಡು ಬಂದದ್ದೇ ಅಷ್ಟು ದಿನಗಳನ್ನಾಗಿರಬಹುದು. ಇಂದು ನಿನ್ನ ನೆನಪುಗಳಷ್ಟೇ ಉಳಿದುಕೊಂಡಿದೆ. ನಿನ್ನನ್ನು ಕಸಿದುಕೊಂಡಂತೆ ನೆನಪುಗಳನ್ನು ಯಾರು ಕಸಿದುಕೊಳ್ಳುತ್ತಾರೆ ಹೇಳು? ಅದು ಸಾಧ್ಯವಿಲ್ಲ.
ನಿನ್ನ ನೆನಪು ಶಾಶ್ವತ. ಅದಕ್ಕೆ ಮರೆವಿಲ್ಲ.
ಯಾಕೆಂದರೆ ಉಸಿರನ್ನು ಎಂದಾದರೂ ಮರೆಯಲು ಸಾಧ್ಯವಾ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ